ಸುಳ್ಯ: ಪುತ್ತೂರಿನಿಂದ ಬೆಂಗಳೂರಿಗೆ ನಿನ್ನೆ ರಾತ್ರಿ ತೆರಳಿದ್ದ ಸರಕಾರಿ ಬಸ್ನಲ್ಲಿ ಅನ್ಯಕೋಮಿನ ಯುವಕ ಹಾಗೂ ಯುವತಿಯರು ಪ್ರಯಾಣಿಸುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಬಸ್ಸನ್ನು ತಡೆದ ಘಟನೆ ನಡೆದಿದೆ.
ಪುತ್ತೂರಿನಿಂದ ಬೆಂಗಳೂರಿಗೆ ನಿನ್ನೆ ರಾತ್ರಿ ಹೋಗುತ್ತಿದ್ದ ಸರಕಾರಿ ಬಸ್ ನಲ್ಲಿ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದು, ಪಕ್ಕದ ಸೀಟಲ್ಲಿ ಬೆಳ್ಳಾರೆಯ ಯುವಕನೊಬ್ಬ ಪ್ರಯಾಣಿಸುತ್ತಿದ್ದುದರಿಂದ ಹಿಂದೂ ಯುವತಿಯರ ಜತೆಗೆ ಮುಸ್ಲಿಂ ಯುವಕ ಬೆಂಗಳೂರಿಗೆ ಪುಯಾಣಿಸುತ್ತಿದ್ದಾನೆಂಬ ತಪ್ಪು ಮಾಹಿತಿಯ ಮೇರೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಬಸ್ಸನ್ನು ಬೆನ್ನಟ್ಟಿ ಆನೆಗುಂಡಿಯಲ್ಲಿ ಅಡಗಟ್ಟಿದ ಹಾಗೂ ಪೈಚಾರಿನಲ್ಲಿ ಇಳಿದರು. ಆ ಯುವಕನ ಪರವಾಗಿ ಸಾರ್ವಜನಿಕರು ಸೇರಿದಾಗ ಪೊಲೀಸರು ಬಂದು ಹಿಂದೂ ಜಾಗರಣ ವೇದಿಕೆಯವರನ್ನು ಪೋಲಿಸ್ ಠಾಣೆಗೆ ಕರೆದೊಯ್ದ ಮತ್ತು ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ನಾಯಕರಿಗೂ ಪೊಲೀಸರಿಗೂ ಮಾತಿನ ಚಕಮಕಿಯಾಗಿ ಬಳಿಕ ಇತ್ಯರ್ಥಗೊಂಡರೂ ಕೊನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ನಾಯಕರು ಎಸ್.ಐ ಅವರಿಗೆ ಠಾಣೆಯಲ್ಲೇ ಎಚ್ಚರಿಕೆ ನೀಡಿದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ.
ಪುತ್ತೂರಿಗೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವತಿಯರು ನಿನ್ನೆ ರಾತ್ರಿ ಬೆಂಗಳೂರಿಗೆ ಹೋಗುವ ಬಸ್ಸಿಗೆ ಹತ್ತಿದರು. ಅದೇ ಬಸ್ಸಲ್ಲಿ ಕುಂಬ್ರದವರೆಗೆ ತೆರಳಲು ಬೆಳ್ಳಾರೆ ಸಮೀಪದ ನೌಶಾದ್ ಎಂಬ ಮುಸ್ಲಿಂ ಯುವಕನೊಬ್ಬ ಹತ್ತಿದ್ದ. ಬಸ್ಸಿನ ಎದುರುಗಡೆಯ ಸೀಟಿನ ಒಂದು ಬದಿಯ ಸೀಟಲ್ಲಿ ಆ ಯುವತಿಯರು ಕುಳಿತಿದ್ದರೆ, ಇನ್ನೊಂದು ಬದಿಯ ಸೀಟಲ್ಲಿ ನೌಷಾದ್ ಕುಳಿತಿದ್ದನೆನ್ನಲಾಗಿದೆ.
ಬಸ್ಸು ಕುಂಬ್ರ ತಲುಪಿದಾಗ ಆ ಯುವಕ ಅಲ್ಲಿ ಇಳಿಯದೆ ಬೆಂಗಳೂರಿಗೆ ಮತ್ತೆ ಟಿಕೆಟ್ ಪಡೆದ ಎನ್ನಲಾಗಿದೆ. ಕುಂಬ್ರದಲ್ಲಿ ಇಳಿಯಬೇಕಾದ ಯುವಕ ಆ ಯುವತಿಯರ ಜತೆ ವಿಹರಿಸುವುದಕ್ಕಾಗಿಯೇ ಬೆಂಗಳೂರಿಗೆ ತೆರಳುತ್ತಿದ್ದಾನೆಂದು ಬಸ್ಸಲಿದ ಯಾರೋ ಪುತ್ತೂರಿನ ಹಿಂದೂ ಜಾಗರಣ ವೇದಿಕೆಯ ಯುವಕರಿUನೀ ಮಾಹಿತಿ ನೀಡಿದ ಮೇರೆಗೆ ಪುತ್ತೂರಿನ ಐದಾರು ಮಂದಿ ಯುವಕರು ತಮ್ಮ ಕಾರಲ್ಲಿ ಬಸ್ಸನ್ನು ಬೆಂಬತ್ತಿ ಬಂದು ಆನೆಗುಂಡಿಯಲ್ಲಿ ಬಸ್ಸನ್ನು ಅಡ್ಡಗಟ್ಟಿದ್ದಾರೆ. ಯುವಕರು ಬಸ್ಸು ಹತ್ತಿ ಎದುರು ಸೀಟಲ್ಲಿ ಕುಳಿತಿದ್ದ ನೌಷಾದ್ ನನ್ನು ವಿಚಾರಿಸಿದರಲ್ಲದೆ ಆತನ ಮೊಬೈಲನ್ನು ಎಳೆದುಕೊಂಡರು. ಯುವತಿಯರ ಆತ ಮಾತನಾಡುತ್ತಿದ್ದ ಬಗ್ಗೆ ಯುವಕರು ಪ್ರಶ್ನಿಸಿದಾಗ ಆ ಯುವತಿಯರು, ನೌಶಾದ್ ಮತ್ತು ಬಸ್ ಕಂಡಕ್ಟರ್ ನಿರಾಕರಿಸಿದರು. ಆ ಸಂದರ್ಭದಲ್ಲಿ ಅದೇ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸರೊಬ್ಬರು, ” ನೀವು ಬಸ್ಸಲ್ಲಿ ಈ ರೀತಿ ಜಗಳ ಮಾಡಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಏನಿದ್ದರೂ ಸುಳ್ಯ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಇತ್ಯರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನು ಒಪ್ಪಿಕೊಂಡ ಹಿಂದೂ ಜಾಗರಣ ವೇದಿಕೆಯ ಯುವಕರು ಬಸ್ಸನ್ನು ಪೋಲೀಸ್ ಠಾಣೆಗೆ ಕೊಂಡೊಯ್ಯಬೇಕೆoದು ಬಸ್ ಚಾಲಕ ಮತ್ತು ಕಂಡಕ್ಟರ್ ಗೆ ತಾಕೀತು ಮಾಡಿ, ನೌಷಾದ್ ನ ಮೊಬೈಲ್ ಸಮೇತ ಬಸ್ಸಿನಿಂದ ಕೆಳಗಿಳಿದು ತಮ್ಮ ಕಾರಲ್ಲಿ ಬಸ್ಸನ್ನು ಹಿಂಬಾಲಿಸ ತೊಡಗಿದರು. ಪೈಚಾರಿನಲ್ಲಿ ಪ್ರಯಾಣಿಕರೊಬ್ಬರನ್ನು ಇಳಿಸುವುದಕ್ಕಾಗಿ ಬಸ್ಸು ನಿಂತಾಗ ನೌಷಾದ್ ಕೂಡ ಬಸ್ಸಿಂದ ಇಳಿದು ತನ್ನ ಸ್ವಜಾತಿ ಬಾಂಧವರಿಗೆ ವಿಷಯ ತಿಳಿಸಿ ತನ್ನ ಮೊಬೈಲನ್ನು ವಿನಾಕಾರಣ ಹಿಂದೂ ಜಾಗರಣ ವೇದಿಕೆಯ ಯುವಕರು ಇಟ್ಟು ಕೊಂಡಿರುವುದಾಗಿ ತಿಳಿಸಿದನೆನ್ನಲಾಗಿದೆ. ಆ ಸಂದರ್ಭದಲ್ಲಿ ಅಲ್ಲಿಯ ಹತ್ತಿಪ್ಪತ್ತು ಮಂದಿ ನೌಶಾದ್ ನ ಸ್ವಜಾತಿ ಬಾಂಧವರು ಬಸ್ ಮತ್ತು ಕಾರಿನದುರು ಸೇರಿದರು. ಬಸ್ಸನ್ನು ಹಿಂದೂ ಜಾಗರಣ ವೇದಿಕೆಯ ಯುವಕರು ಹಿಂಬಾಲಿಸುತ್ತಿರುವ ಮಾಹಿತಿ ಮೊದಲೇ ಬಂದ ಹಿನ್ನೆಲೆಯಲ್ಲಿ ಸುಳ್ಯ ಎಸ್.ಐ ಹರೀಶ್ ಪೈಚಾರಿಗೆ ಧಾವಿಸಿದರು. ಆ ವೇಳೆಗೆ ಬಸ್ ಬಸ್ಸು ನಿಂತು ಜನ ಸೇರಿದ್ದರು. ಎಸ್,ಐ ಹರೀಶ್ ಹಿಂದೂ ಜಾಗರಣ ವೇದಿಕೆಯ ಐವರು ಯುವಕರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬಂದರು. ಬಸ್ಸನ್ನು ಕೂಡ ಠಾಣೆಗೆ ತರುವಂತೆ ಸೂಚಿಸಿದರು.
ಠಾಣೆಯಲ್ಲಿ ಬಸ್ಸಲ್ಲಿದ್ದ ಆ ಇಬ್ಬರು ಯುವತಿಯರನ್ನು ಮತ್ತು ನೌಷಾದ್ ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಆ ವೇಳೆಗೆ ಪುತ್ತೂರಿನಿಂದ ಹಿಂದೂ ಜಾಗರಣ ವೇದಿಕೆಯ ಮುಖಂಡರುಗಳಾದ ಅಜಿತ್ ರೈ ಹೊಸಮನೆ, ನ್ಯಾಯವಾದಿ ಚಿನ್ಮಯ್ ಮತ್ತಿತರ ಹಲವು ಯುವಕರು ಮತ್ತು ಸುಳ್ಯದ ಹಿಂದೂ ಜಾಗರಣ ವೇದಿಕೆಯ ಯುವಕರು ಪೋಲಿಸ್ ಠಾಣೆಗೆ ಬಂದರು. ನೌಷಾದ್ ನ ಮೊಬೈಲನ್ನು ಪರಿಶೀಲಿಸಿದಾಗ ಮತ್ತು ಆ ಯುವತಿಯರ ಮೊಬೈಲ್ ಪರಿಶೀಲಿಸಿದಾಗ ಅವರ ನಂಬರ್ ಗಳು ಎರಡೂ ಮೊಬೈಲ್ ಗಳಲ್ಲಿ ಇರಲಿಲ್ಲ ಮತ್ತು ಎರಡೂ ಕಡೆಯವರು ತಮಗೆ ಈ ಮೊದಲು ಪರಿಚಯವೇ ಇಲ್ಲದ ಬಗ್ಗೆ ಹೇಳಿಕೊಂಡರಲ್ಲದೆ ಬಸ್ಸಲ್ಲಿ ಕೂಡ ಪರಸ್ಪರ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರೆನ್ನಲಾಗಿದೆ. ಇದನ್ನು ಬಸ್ ಕಂಡಕ್ಟರ್ ಕೂಡ ಖಚಿತಪಡಿಸಿದ್ದರಿಂದ ಹಿಂದೂ ಜಾಗರಣ ವೇದಿಕೆಯವರು ತಪ್ಪು ಮಾಹಿತಿಯಿಂದ ಬಸ್ಸನ್ನು ಅಡ್ಡಗಟ್ಟಿದರೆಂಬುದು ಸ್ಪಷ್ಟಗೊಂಡಿತು. ಆ ಮಹಿಳೆಯರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊ0ಡವರೆ0ದೂ ವಿಚಾರಣೆ ವೇಳೆ ತಿಳಿದು ಬಂದಿದೆ.
ಆದರೆ ಬಳಿಕ ನಡೆದದ್ದೇ ಬೇರೆ, ಪುತ್ತೂರಿನಿಂದ ಬಂದಿದ್ದ ನ್ಯಾಯವಾದಿ ಚಿನ್ಮಯ್ ಎಂಬವರನ್ನು, ಎ.ಎಸ್.ಐ ಶಿವರಾಮಗೌಡರು ಅಗೌರವ ಪೂರ್ವಕ ನಡೆಸಿಕೊಂಡರೆ0ಬ ವಿಚಾರ ಮತ್ತು ಸರ್ಕಲ್ ಇನ್ ಸ್ಪೆಕ್ಟರ್ ಜೋಗಿಯವರು ಬಸ್ ಅಡಗಟ್ಟಿದ ಪುತ್ತೂರಿನ ಹಿಂದೂ ಜಾಗರಣ ವೇದಿಕೆಯ ಯುವಕರನ್ನು ಲಾಕಪ್ ನಲ್ಲಿ ಕೂರಿಸಲು ಪೋಲೀಸ್ ಸಿಬ್ಬಂದಿಗೆ ಹೇಳಿದರೆಂಬ ವಿಚಾರ ಮುನ್ನೆಲೆಗೆ ಬಂದಿತು. ಹೀಗೆ ಹೇಳಿದ್ದು ಸರಿಯೇ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡರು ಪ್ರಶ್ನಿಸತೊಡಗಿದರು. ಇದನ್ನು ಎಸ್.ಐ ಹರೀಶ್ ರವರು ತೀವ್ರವಾಗಿ ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವ ಬಗ್ಗೆ ಪೊಲೀಸರಿಗೆ ಪೂರ್ಣ ಸ್ವಾತಂತ್ರವಿದೆ, ಅದನ್ನು ನೀವು ಪ್ರಶ್ನಿಸುವಂತಿಲ್ಲ ಎಂದು ಹೇಳತೊಡಗಿದರು. ಈ ವಿಚಾರವಾಗಿ ಹಿಂದೂ ಜಾಗರಣ ವೇದಿಕೆಯ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ಸುಮಾರು 1 ಗಂಟೆ ಕಾಲ ಮಾತಿನ ಚಕಮಕಿ ನಡೆಯಿತು.
ಎ.ಎಸ್.ಐ ಶಿವರಾಮರು ಕ್ಷಮೆ ಕೇಳಬೇಕು ಎಂಬ ಬೇಡಿಕೆಯನ್ನು ಕೂಡ ಹಿಂದೂ ಜಾಗರಣ ವೇದಿಕೆಯ ನಾಯಕರು ಮುಂದಿಟ್ಟರು. ಅದನ್ನು ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಎ.ಐ ಯವರು ನಿರಾಕರಿಸಿದರು. ಅಷ್ಟು ಹೊತ್ತಿಗೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರಿಂದ ಸರ್ಕಲ್ ಇನ್ಸ್ ಪೆಕ್ಟರ್ ಗೆ ಫೋನು ಬಂತು ಎಂದು ತಿಳಿದುಬಂದಿದೆ. ಕೊನೆಯಲ್ಲಿ ಯಾವ ವಿಚಾರವೂ ಇಲ್ಲದೆ ಪ್ರಕರಣ ಇತ್ಯರ್ಥಗೊಂಡಿತು. ಪೋಲಿಸರು ಆ ಮಹಿಳೆಯರನ್ನು ಅದೇ ಬಸ್ಸಲ್ಲಿ ಬೆಂಗಳೂರಿಗೆ ಕಳಿಸಿದರು. ನಷಾದ್ ರನ್ನು ಮಾತ್ರ ಶಾಲೆಯಲ್ಲಿ ಕೂರಿಸಿ ನಂತರದ ಬಸ್ಸಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದರು ಎಂದು ತಿಳಿದು ಬಂದಿದೆ.