ಸುಳ್ಯ: ಖ್ಯಾತ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯಾ ಅತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ರಾಜೇಶ್, ಅತ್ತೆ ಸೀತಾ, ಮಾವ ಗಿರಿಯಪ್ಪ ಗೌಡ ಕಾಪಿಲ, ಮೈದುನ, ಮೈದುನನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ರಾಜೇಶ್ ಅವರನ್ನು ಐಶ್ವರ್ಯ ಮದುವೆಯಾಗಿದ್ದರು. ಐಶ್ವರ್ಯ ಯುಎಸ್ಎ ನಲ್ಲಿ ಎಂಬಿಎ ಮಾಡಿದ್ದರು. ಪತಿ ರಾಜೇಶ್, ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಮಾಲೀಕರಾಗಿದ್ದಾರೆ. ಇದೇ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣ್ಯ ಅವರ ತಂಗಿ ಗಂಡ ರವೀಂದ್ರ ಆಡಿಟರ್ ಅಗಿ ಕೆಲಸ ಮಾಡಿಕೊಂಡಿದ್ದರು. ಅವರೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಆದರೆ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣ್ಯ ಅವರ ಕುಟುಂಬದಲ್ಲಿ ಕಲಹ ಇದ್ದಿದ್ದರಿಂದ ಅದನ್ನು ಮಗಳ ಮೇಲೆ ತೀರಿಸಿಕೊಂಡಿದ್ದರು ಎನ್ನಲಾಗಿದೆ.
ರವೀಂದ್ರ ಕುಟುಂಬ ಐಶ್ಯರ್ಯ ಚಾರಿತ್ರ್ಯ ವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದಾಗಿ ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದರಂತೆ. ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತಾ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದರೆಂದು ಹೇಳಲಾಗುತ್ತಿದೆ. ಎಲ್ಲಾ ಘಟನೆಗಳಿಂದ ಮನನೊಂದ ಐಶ್ವರ್ಯಾ, 20 ದಿನಗಳ ಹಿಂದೆ ತವರು ಸೇರಿದ್ದರು.
ಅ. 26 ರಂದು ಮನನೊಂದು ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಐಶ್ವರ್ಯಾಳ ತಾಯಿ, ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ರವೀಂದ್ರ, ಗೀತಾ, ಶಾಲಿನ, ಓಂಪ್ರಕಾಶ್ ಎಂಬವರ ಮೇಲೂ ದೂರು ದಾಖಲಿಸಿದ್ದರು. ಅದರಂತೆ ಐವರನ್ನು ಬಂಧಿಸಲಾಗಿದೆ.