ಸುರತ್ಕಲ್: ಮಧ್ಯ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ಸಣ್ಣ ಪ್ರಾಯದ ಹುಡುಗನಿಗೆ ಚೂರಿ ತೋರಿಸಿ ಬೆದರಿಸಿ 15 ಪವನ್ ಚಿನ್ನ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಧ್ಯ ಗ್ರಾಮದ ದೇವಸ್ಥಾನದ ಬಳಿ ಬಾಬು ದೇವಾಡಿಗರ ಮಗನಾದ ಭರತ್ (14 ವರ್ಷ) ಎಂಬ ಹುಡುಗ ಏಪ್ರಿಲ್ 20 ತಾರೀಖಿನಂದು ದನ ಮೇಯಿಸಲು ಹೋದ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಇಬ್ಬರು ಯುವಕರು ಆತನನ್ನು ನದಿ ಬದಿ ಕರೆದುಕೊಂಡು ಹೋಗಿ ನೀನು ನಿನ್ನ ಮನೆಯಿಂದ ಚಿನ್ನವನ್ನು ತಂದುಕೊಡಬೇಕು ಇಲ್ಲದಿದ್ದರೆ ನಿನ್ನನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತೇವೆ ಎಂದು ಬೆದರಿಸಿದ್ದಾರೆ.
ಅಪ್ಪ ಅಮ್ಮ ಮನೆಯಲ್ಲಿ ಇಲ್ಲದ್ದನ್ನು ಮನಗಂಡ ಯುವಕರು ಭರತ್ ನನ್ನು ಆತನ ಮನೆಗೆ ಕರೆದುಕೊಂಡು ಚೂರಿ ತೋರಿಸಿ, ಕವಾಟಿನ ಬೀಗವನ್ನುಕೊಡಲು ಹೇಳಿ ಕವಾಟಿನಿಂದ 15 ಪವನ್ ಚಿನ್ನವನ್ನು ಕೊಂಡು ಹೋಗಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ವಿಷಯವನ್ನು ಅಪ್ಪ ಅಮ್ಮನಿಗೆ ತಿಳಿಸಿದರೆ ಅವರಿಬ್ಬರನ್ನು ಕೊಲ್ಲುವುದಾಗಿ ಬೆದರಿಸಿ ಹೋಗಿದ್ದಾರೆ. ಈಗ ಸುಮಾರು 3 ದಿನದ ಹಿಂದೆ ಮೇ 5 ತಾರೀಖಿನಂದು ಪುನಃ ಯುವಕರಿಬ್ಬರು ಎರಡು ದಿನದೊಳಗೆ ನೀನು 70000 ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಸಿದ್ದಾರೆ.
ಹೆದರಿದ ಹುಡುಗ ತಂದೆ ತಾಯಿ ಹತ್ತಿರ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ಹುಡುಗನ ತಂದೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಪೋಲೀಸರು ಯುವಕರಿಬ್ಬರನ್ನು ವಶಕ್ಕೆ ತನಿಖೆ ನಡೆಸುತ್ತಿದ್ದಾರೆ ಯುವಕರಿಬ್ಬರು ಈ ಮೊದಲು ಕೂಡಾ ಸಣ್ಣ ಸಣ್ಣ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ಮೇ 8 ರಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ರಂಜಿತ್ ಪೂಜಾರಿ ಯಾನೆ ರಂಜು ( 25) ಮತ್ತು ಮಂಜುನಾಥ ಯಾನೆ ಮಂಜ (25) ಎಂದು ಗುರುತಿಸಲಾಗಿದೆ. ಇವರು ಹುಡುಗನ ಮನೆಗೆ ಪರಿಚಯಸ್ಥರು ಎಂದು ತಿಳಿದು ಬಂದಿದ್ದು, ಕೆಲಸವಿಲ್ಲದ ಕಾರಣ ಈ ರೀತಿಯ ಕೃತ್ಯವನ್ನು ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.