‘ಹಲ್ಲೆ ಮಾಡಿದವರ ಮೇಲೆ ಕೇಸ್ ಹಾಕಿಲ್ಲ, ಇದು ಯಾವ ಕಾನೂನು?’: ನಳಿನ್ ಕುಮಾರ್




ಪುತ್ತೂರು: ದರ್ಬೆಯಲ್ಲಿ ಅಂಗಡಿ ಮೇಲೆ ದಾಳಿ ಮತ್ತು ಮಹಿಳೆ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಇದು ತಾಲಿಬಾನ್ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವೇಳೆ ದರ್ಬೆಯಲ್ಲಿ ನಡೆದ ಗಲಾಟೆ ವಿಚಾರವಾಗಿ, ಸಣ್ಣ ವಿಚಾರ ಮುಂದಿಟ್ಟುಕೊಂಡು ಅಂಗಡಿ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇದು ತಾಲಿಬಾನ್ ಸಂಸ್ಕೃತಿ, ತಾಲಿಬಾನ್ ಸಂಸ್ಕ್ರತಿಯ ಹೋರಾಟಗಳು ಜಾಸ್ತಿಯಾಗುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ ಈ ರೀತಿಯ ಘಟನೆಗಳು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾದ ಮೇಲೆ ಇಂತಹ ಘಟನೆಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ. ಪುತ್ತೂರಿನ ಶಾಸಕ ಹಾಗೂ ಗೃಹ ಸಚಿವರು ಘಟನೆ ಬಗ್ಗೆ ಮೌನದಲ್ಲಿದ್ದಾರೆ. ಈ ಘಟನೆಯ ಹಿಂದೆ ಯಾವ ಶಕ್ತಿಗಳು ಇವೆ ಎಂಬ ಸಂಶಯ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಅಂಗಡಿಯಲ್ಲಿ ನಡೆದ ಘಟನೆ ಬಗ್ಗೆ ಕಾನೂನು ಅಥವಾ ಪೊಲೀಸ್ ಇಲಾಖೆ ಮುಖಾಂತರ ಬಗೆಹರಿಸಬಹುದಿತ್ತು. ಅದು ಬಿಟ್ಟು ಏಕಾಏಕಿ ಅಂಗಡಿಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇಂತಹ ಘಟನೆಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹೊರಗಿನಿಂದ ಬಂದು ಗಲಭೆ ಎಬ್ಬಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ.
ಯಾರು ಹಲ್ಲೆಗೊಳಗಾಗಿದ್ದಾರೆ ಅವರ ಮೇಲೆ 307 ಕೇಸ್ ಹಾಕಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಯಾವುದೇ ಕೇಸ್ ಹಾಕಿಲ್ಲ. ಇದು ಯಾವ ರೀತಿಯ ಕಾನೂನು? ಕೇವಲ ಒಂದು ಮತ ಹಾಗೂ ಧರ್ಮದವರ ಮೇಲೆ ಕೇಸ್ ಹಾಕುವಂತಹ ಕೆಲಸ ಆಗಿದೆ. ಪೊಲೀಸ್ ಇಲಾಖೆಗೆ ಯಾರಾದರೂ ಒತ್ತಡ ಹೇರಿದ್ದಾರಾ? ಇದಕ್ಕೆ ಯಾರ ಒತ್ತಡ ಇದೆ ಎಂಬುದು ಸ್ಪಷ್ಟ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಗೃಹ ಸಚಿವರು ಯಾಕೆ ಈ ಘಟನೆ ಬಗ್ಗೆ ಮಾತಾಡ್ತಿಲ್ಲ? ನೀವೇನೂ ತಾಲಿಬಾನ್ ಸಂಸ್ಕೃತಿಯನ್ನ ವಿಸ್ತಾರ ಮಾಡಲು ಹೊರಟಿದ್ದೀರಾ? ಸರಿ, ತಪ್ಪು ಹೇಳಿಕೆಯನ್ನ ಕೊಡಿ. ಗೃಹಸಚಿವರಿಗೆ ಆರ್ಎಸ್ಎಸ್ ಬಗ್ಗೆ ಮಾತಾಡುವ ದಮ್ಮಿದೆ. ಈ ಮತೀಯವಾದ, ತಾಲಿಬಾನ್ ಸಂಸ್ಕೃತಿ ವಿರುದ್ಧ ಯಾಕೆ ಮಾತಾಡ್ತಾ ಇಲ್ಲ? ಎಂದು ಅವರು ಗಂಭೀರವಾಗಿ ಟೀಕಿಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಪುರುಷರ ಕಟ್ಟೆಯಲ್ಲಿ ಮಹಿಳೆಯೊಬ್ಬರ ಮೇಲೆ ಚೂರಿ ಹಿಡಿದು ಹಲ್ಲೆಗೆ ಯತ್ನಿಸಿದ ಘಟನೆಯನ್ನು ಅವರು ಉಲ್ಲೇಖಿಸಿದ್ದರ ಜೊತೆಗೆ, ಬಿ.ಸಿ ರೋಡ್ನಲ್ಲಿ ನಡೆದ ಲಾವಣ್ಯಳ ಹತ್ಯೆಯನ್ನೂ ಅವರು ಉಲ್ಲೇಖಿಸಿ, ಈ ರೀತಿಯ ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರುಕಳಿಸುತ್ತಿರುವುದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಹಲ್ಲೆ ಮಾಡಿದವರ ಮೇಲೆ 307 ಕೇಸ್ ಹಾಕದೆ, ಹಲ್ಲೆಗೊಳಗಾದವರ ಮೇಲೆ ಕೇಸ್ ಹಾಕಿರೋದು ಹಾಸ್ಯಾಸ್ಪದ. ಇಂತಹ ಕಾನೂನು ದೇಶದಲ್ಲೇ ಮೊದಲ ಬಾರಿಗೆ ಆಗಿರೋದು. ಎಸ್ಪಿಯವರು ಜಿಲ್ಲೆಯಲ್ಲಿ ಏನು ಮಾಡುತ್ತಿದ್ದಾರೆ? ಈ ಕೂಡಲೇ ಹಲ್ಲೆ ಮಾಡಿದವರ ಮೇಲೆ ಕೇಸ್ ದಾಖಲು ಮಾಡಬೇಕು ಇಲ್ಲದಿದ್ದಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಮುಂದೆ ಆಗುವ ಎಲ್ಲಾ ಘಟನೆಗಳಿಗೆ ಸರ್ಕಾರವೇ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ.








