


ಎರಡು ಅವಧಿಯಲ್ಲೂ ದೇಶದ ಜನತೆಯಲ್ಲಿ ವಿಶ್ವಾಸ ಮೂಡಿಸಿದೆವು. ಈಗ ಮೂರನೇ ಬಾರಿ ಎನ್ಡಿಎಗೆ ಆಶೀರ್ವಾದ ಸಿಕ್ಕಿದೆ. ಇದಕ್ಕಾಗಿ ನಾನು ತಲೆ ಬಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ನಾಯಕರು, ಪಕ್ಷದ ಕಾರ್ಯಕರ್ತರು ಪ್ರಧಾನಿಯನ್ನು ಹೂಮಳೆಗೆರೆದು ಸ್ವಾಗತಿಸಿದ್ದಾರೆ.
ಫಲಿತಾಂಶದ ಬಳಿಕ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಈ ಪ್ರೀತಿ, ಈ ಆಶೀರ್ವಾದಕ್ಕಾಗಿ ನಾನು ದೇಶದ ಜನರಿಗೆ ಋಣಿ. ಇಂದು ಮಂಗಳಕರ ದಿನ, ಈ ಪಾವನ ದಿನದಂದು ಮೂರನೇ ಬಾರಿ ಸರ್ಕಾರ ರಚನೆಗೆ ತಯಾರಿದೆ. ಬಿಜೆಪಿಯಲ್ಲಿ ನಂಬಿಕೆ ಇಟ್ಟಿರುವ ಜನತೆಗೆ ನಾವು ಆಭಾರಿಯಾಗಿದ್ದೇವೆ. ಇಂದಿನ ಗೆಲುವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಗೆಲುವು, ಇದು 140 ಕೋಟಿ ಜನರ ಗೆಲುವು ಎಂದು ಮೋದಿ ಹೇಳಿದ್ದಾರೆ. ಈ ಬಿಸಿಲಿನಲ್ಲಿ ಕೆಲಸ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಮೋದಿ ಧನ್ಯವಾದಗಳನ್ನರ್ಪಿಸಿದ್ದಾರೆ. 2019ರಲ್ಲಿ ದೇಶ ನಮಗೆ ಎರಡನೇ ಬಾರಿ ಅವಕಾಶ ನೀಡಿದೆ. 2024 ರಲ್ಲಿ, ಎನ್ಡಿಎಗೆ ಸಿಕ್ಕ ಆಶೀರ್ವಾದದೊಂದಿಗೆ ನಾವು ಹಿಂತಿರುಗಿದ್ದೇವೆ ಎಂದು ಹೇಳಿದರು.