ಚಿಕ್ಕಮಗಳೂರು : ಮದ್ಯ ಸೇವಿಸಿ ಆಪರೇಷನ್ ಮಾಡಲು ಬಂದ ವೈದ್ಯ, ಕುಸಿದು ಬಿದ್ದು ಅಸ್ವಸ್ಥರಾದ ಘಟನೆ ಕಳಸ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ವೈದ್ಯ ಬಾಲಕೃಷ್ಣ ಎಂಬವರು ಶಸ್ತ್ರಚಿಕಿತ್ಸೆಯ ಮಾಡಲು ಮದ್ಯಸೇವಿಸಿ ಬಂದು ಕುಸಿದು ಬಿದ್ದಿದ್ದಾರೆ. ಈ ವೇಳೆ ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ, ಅನಸ್ತೇಷಿಯಾ ಇಂಜೆಕ್ಷನ್ ಪಡೆದಿದ್ದ 9 ಮಹಿಳೆಯರ ಪರದಾಡಿದ ಘಟನೆ ನಡೆದಿದೆ.
ಶಸ್ತ್ರ ಚಿಕಿತ್ಸೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳುವ ವೇಳೆ ಆಪರೇಷನ್ ಥಿಯೇಟರ್ ನಲ್ಲಿ ವೈದ್ಯ ಬಾಲಕೃಷ್ಣ ಕುಸಿದು ಬಿದ್ದಿದ್ದಾರೆ. ಅಸ್ವಸ್ಥಗೊಂಡ ವೈದ್ಯನನ್ನು ಸಿಬ್ಬಂದಿಗಳು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯ ಬಾಲಕೃಷ್ಣ ಮದ್ಯಪಾನ ಮಾಡಿ ಬಂದಿದ್ದಾರೆಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದು, ವೈದ್ಯ ಬಾಲಕೃಷ್ಣ ವಿರುದ್ಧ ಶಿಸ್ತು ಕ್ರಮಕ್ಕೆ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.
ಕಳಸ ತಾಲೂಕು ಸರ್ಕಾರಿ ವೈದ್ಯನ ವಿರುದ್ಧ ಮದ್ಯಸೇವನೆ ಆರೋಪ ಕೇಳಿಬಂದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್, ‘ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.