ಮುಲ್ಕಿ: ಚಾಲಕನ ನಿರ್ಲಕ್ಷತನಕ್ಕೆ ಲಾರಿಯೊಂದು ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಘಟನೆ ಮುಲ್ಕಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ಸವಾರನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ವರದಿಯಾಗಿದೆ.
ಗುರುವಾರ ಮುಂಜಾನೆಯ ವೇಳೆ ಈ ಅಪಘಾತ ಸಂಭವಿಸಿದೆ. ಸ್ಕೂಟರ್ ಸವಾರ ಸಂಗಪ್ಪ ಮಡಿವಾಳಪ್ಪ ಮದರಿ (57) ಚಿಕಿತ್ಸೆ ಫಲಿಸದೇ ಮೃತಪಟ್ಟ ದುರ್ದೈವಿ.
ಅವರು ಇಲ್ಲಿನ ಬಪ್ಪನಾಡು ದೇಗುಲದ ಎದುರಿನ ನೇಚರ್ ಟೆಂಪಲ್ ವಸತಿ ಸಮುಚ್ಚಯದಲ್ಲಿ ವಾಚ್ಮನ್ ಆಗಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಪುತ್ರಿಯನ್ನು ಕಾಲೇಜಿಗೆ ಬಿಡುವುದಕ್ಕಾಗಿ ಆಕೆಯೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಲಾರಿ ಬಂದು ಗುದ್ದಿತ್ತು.
ಈ ಸಂದರ್ಭ ರಸ್ತೆಗೆಸೆಯಲ್ಪಟ್ಟಿದ್ದ ಸಂಗಪ್ಪ ತೀವ್ರವಾಗಿ ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಪುತ್ರಿ ಸ್ಕೂಟರ್ನಿಂದ ಎಸೆಯಲ್ಪಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಮುಲ್ಕಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.