‘ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ತಮಿಳು ಮಾಧ್ಯಮಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವರದಿ ಮಾಡಿದ್ದವು. ಆದರೆ, ಇದು ಸುಳ್ಳು ಸುದ್ದಿ ಅನ್ನೋ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ‘ರಮ್ಯಾ ಆರೋಗ್ಯವಾಗಿದ್ದಾರೆ’ ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಮ್ಯಾ ಅವರು ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
ರಮ್ಯ ಹೆಸರಿನ ತಮಿಳು ಕಿರುತೆರೆ ನಟಿ ಮೃತಪಟ್ಟಿದ್ದರು ಎನ್ನಲಾಗಿದೆ. ಈ ವಿಚಾರ ಹೇಳುವಾಗ ತಮಿಳುನಾಡಿನ ಕೆಲವರು ರಮ್ಯಾ ದಿವ್ಯಾ ಸ್ಪಂದನಾ ಫೋಟೋ ಹಂಚಿಕೊಂಡಿದ್ದಾರೆ. ಆ ಬಳಿಕ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈಗ ರಮ್ಯಾ ಅವರು ಆರಾಮಾಗಿದ್ದಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಸದ್ಯ ರಮ್ಯಾ ಯೂರೋಪ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಸುತ್ತಾಡುತ್ತಾ, ಹಲವರನ್ನು ಭೇಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಹಲವು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
‘X’ನಲ್ಲಿ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಅವರು ‘ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಸ್ವಭಾವದ ಮಹಿಳೆ ದಿವ್ಯಾ ಸ್ಪಂದನಾ ಅವರನ್ನು ಜಿನೀವಾದಲ್ಲಿ ಭೇಟಿ ಮಾಡಿದ್ದೇನೆ. ಬೆಂಗಳೂರು ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಬ್ಬರು ಊಟಕ್ಕೆ ಕುಳಿತ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್ ಮಾಡಿದ ಚಿತ್ರಾ ಸುಬ್ರಮಣ್ಯಂ ‘ನಾನು ಈಗಷ್ಟೇ ರಮ್ಯಾ ಜೊತೆಗೆ ಮಾತನಾಡಿದೆ ಚೆನ್ನಾಗಿಯೇ ಇದ್ದಾರೆ. ಜೀನೀವಾದಿಂದ ಪ್ರೇಗ್ ಗೆ ನಾಳೆ ಹೋಗುತ್ತಿದ್ದಾರೆ, ಬಳಿಕ ಬೆಂಗಳೂರಿಗೆ ತೆರಳುತ್ತಾರೆ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ರಮ್ಯಾ ವಿದೇಶದಲ್ಲಿದ್ದು, ಸದ್ಯದಲ್ಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಉತ್ತರಾಕಾಂಡ ಸಿನಿಮಾದಲ್ಲೂ ನಟಿ ಬಣ್ಣ ಹಚ್ಚುತ್ತಿದ್ದು, ಸಿನಿಮಾ ತಂಡವನ್ನು ಸೇರಲಿದ್ದಾರೆ.