



ಕುಕ್ಕೆ ಸುಬ್ರಮಣ್ಯ ದೇವಾಲಯದ ಶಿಷ್ಟಾಚಾರ ವಿಭಾಗದ ಸಿಬ್ಬಂದಿ ಗೋಪಿನಾಥ್ ನಂಬಿಷಾಗೆ ಕೇರಳದ ಮಧೂರು ದೇವಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದರೂ ಈ ಆದೇಶಕ್ಕೆ ಬೆಲೆ ನೀಡದೆ ಕುಕ್ಕೆ ದೇವಸ್ಥಾನದಲ್ಲೇ ಉಳಿದುಕೊಂಡ ಪ್ರಸಂಗವೊಂದು ನಡೆದಿದೆ.
ಸರ್ಕಾರದ ಸಂಬಳ ಪಡೆಯುವ ಸಿಬ್ಬಂದಿಯೋರ್ವ ತನ್ನ ಇಲಾಖೆಯ ಆಯುಕ್ತರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದೇ ಭದ್ರವಾಗಿ ನೆಲೆಯೂರಿದ್ದಾರೆ. ಕುಕ್ಕೆ ಸುಬ್ರಮಣ್ಯ ದೇವಾಲಯದ ಶಿಷ್ಟಾಚಾರ ವಿಭಾಗದ ಸಿಬ್ಬಂದಿ ಗೋಪಿನಾಥ್ ನಂಬಿಷಾಗೆ ಕೇರಳದ ಮಧೂರು ದೇವಾಲಯಕ್ಕೆ ವರ್ಗಾವಣೆ ಮಾಡಿ ಆಯುಕ್ತರು 11/09/2023ರಂದು ಆದೇಶ ಮಾಡಿದ್ದರು.
ಆದೇಶ ಪ್ರಶ್ನಿಸಿ ಗೋಪಿನಾಥ್ ಅವರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಮದನಂತೇಶ್ವರ ದೇವಾಲಯದಲ್ಲಿ ಖಾಲಿ ಹುದ್ದೆ ಇಲ್ಲವೆಂಬ ಆಧಾರದಲ್ಲಿ ಅರ್ಜಿದಾರ ಗ್ರೂಪ್ ಸಿ ಶ್ರೇಣಿಯ ಸಿಬ್ಬಂದಿ ಗೋಪಿನಾಥ್ ಅವರನ್ನು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ವರ್ಗಾವಣೆ ಮಾಡಿ ಮೌಖಿಕ ಆದೇಶ ನೀಡುವ ಮೂಲಕ ರಿಟ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ನೀಡಿತ್ತು. ಆದರೆ ನ್ಯಾಯಪೀಠ ನೀಡಿದ ವರ್ಗಾವಣೆ ಆದೇಶಕ್ಕೂ ಬೆಲೆ ನೀಡದ ಗೋಪಿನಾಥ್ ಅವರು ಇನ್ನೂ ಕುಕ್ಕೆ ದೇವಸ್ಥಾನದಲ್ಲೇ ಭದ್ರವಾಗಿ ನೆಲೆಯಾಗಿರುವುದು ಭಕ್ತರಿಗೆ ದಿಗ್ಭ್ರಮೆಯನ್ನುಂಟುಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಕ್ತ ಸಮೂಹವು ವರ್ಗಾವಣೆಯಾದ ಗೋಪಿನಾಥ್ ಅವರಿಗೆ ಮುಜರಾಯಿ ಆಯುಕ್ತರು, ಸುಬ್ರಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಯವರು ಬೆಂಬಲ ನೀಡುತ್ತಿರುವ ಕಾರಣದಿಂದಾಗಿಯೇ ಈತ ನ್ಯಾಯಾಲಯದ ಆದೇಶವನ್ನೂ ಕ್ಯಾರ್ ಮಾಡದೇ ಅಪಚಾರ ಎಸಗುತ್ತಿದ್ದಾರೆಂದು ಆರೋಪಿಸಿದ್ದಾರೆ. ಪ್ರತಿ ದಿನ ಕುಕ್ಕೆ ದೇವಳಕ್ಕೆ ಬರುವ ಭಕ್ತಾದಿಗಳನ್ನು ಬೆಳಗ್ಗೆ 10.30 ಕ್ಕೆ ದೇವರಿಗೆ ಮಹಾಭಿಷೇಕ ಆಗುವ ಸಮಯದಲ್ಲಿ ದೇವಸ್ಥಾನಕ್ಕೆ ಬಂದು ವಿವಿಐಪಿ ದರ್ಶನ ಮಾಡಿಸುವುದು, ಅವರಿಗೆ ಶಾಲು ಹೊದಿಸುವ ಮೂಲಕ ಅವರಿಂದ ಸಾವಿರಾರು ರೂಪಾಯಿ ದಕ್ಷಿಣೆ ಪಡೆದು ಹೋಗುತ್ತಿದ್ದಾನೆ ಮತ್ತು ಪ್ರತಿದಿನ ಶೃಂಗೇರಿ ಮಠದ ಭೋಜನ ಶಾಲೆಯಿಂದ ತನ್ನ ಮನೆಗೆ ಉಚಿತವಾಗಿ ಊಟವನ್ನು ತೆಗೆದುಕೊಂಡು ಹೋಗುತ್ತಿದ್ದಾನೆ ಎಂದು ಭಕ್ತ ಸಮೂಹ ಆರೋಪಿದೆ.
ಇದೆಲ್ಲ ಗೊತ್ತಿದ್ದರೂ ಸಹ ಹಾಗೂ ಸಿಸಿಟಿವಿಯಲ್ಲಿ ಚಿತ್ರಗಳು ದಾಖಲಾಗಿದ್ದರೂ ಕೂಡಾ ಕಾರ್ಯನಿರ್ವಹಣಾಧಿಕಾರಿಯವರು “ನನಗೇನೂ ಗೊತ್ತೇ ಇಲ್ಲ ಅನ್ನುವ ರೀತಿ ಅವನಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಆಯುಕ್ತರು ಸಹ ಮೇಲ್ನೋಟಕ್ಕೆ ಅವನಿಗೆ ಸಹಾಯ ಮಾಡುತ್ತಿದ್ದಾರೆ, ಶಿಷ್ಟಾಚಾರದ ವಿಭಾಗದಲ್ಲಿ ಕೆಲಸ ಮಾಡುವ ಇಬ್ಬರು ನೌಕರರು ಶೃಂಗೇರಿ ಮಠದಿಂದ ಪ್ರತಿದಿನ ಉಚಿತವಾಗಿ ಊಟಗಳನ್ನು ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಇವರಿಗೆ ತಿಂಗಳಿಗೆ ಐವತ್ತು ಸಾವಿರಕ್ಕಿಂತ ಮೇಲ್ಪಟ್ಟು ಸಂಬಳವಿದ್ದು ಉಚಿತವಾಗಿ ಎಲ್ಲಾ ಸೇವೆಗಳು ಇವರಿಗೆ ಬೇಕಾಗಿದೆ. ಹೀಗಿದ್ದರೂ ಸಹ ಕಾರ್ಯನಿರ್ವಹಣಾ ಅಧಿಕಾರಿಯವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಗೋಪಿನಾಥ್ ನಂಬಿಷಾರವರು ಸಾಕಷ್ಟು ರಾಜಕಾರಣಿಗಳಿಂದ ಒತ್ತಡ ಹಾಕಿಸುವ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರದ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದಾರೆಂದು ಭಕ್ತ ಸಮೂಹ ಆರೋಪಿಸಿದೆ.
ಸಿ ಗ್ರೂಪಿನ ನೌಕರ ಇಡೀ ದೇವಸ್ಥಾನದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೂ ಕೂಡಾ ಆಯುಕ್ತರು ಹಾಗೂ ಕಾರ್ಯನಿರ್ವಹಣಾ ಅಧಿಕಾರಿಯವರು ಕಣ್ಣು ಮುಚ್ಚಿ ಕುಳಿತುಕೊಂಡಿರುವುದು ವಿಪರ್ಯಾಸವೇ ಸರಿ. ಹಾಗೂ ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ ಪ್ರಥಮ ಸಭೆಯಲ್ಲಿ ಮುಜರಾಯಿ ಸಚಿವರು ಇವನನ್ನು ಸಸ್ಪೆಂಡ್ ಮಾಡುವಂತೆ ಹೇಳಿದರು ಕೂಡಾ ಆಯುಕ್ತರು ಇವನಿಗೆ ಸಹಾಯ ಮಾಡುತ್ತಿದ್ದಾರೆಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರಿ ಸಿಬ್ಬಂದಿ ಗೋಪಿನಾಥ್ ಅವರನ್ನು ನ್ಯಾಯಾಲಯದ ಆದೇಶದಂತೆ ಸುಬ್ರಹ್ಮಣ್ಯ ದೇವಸ್ಥಾನದಿಂದ ತೆರವುಗೊಳಿಸಿ ನ್ಯಾಯಪೀಠದ ಆದೇಶಕ್ಕೆ ತಲೆಬಾಗಬೇಕು ಎಂಬುದು ಕುಕ್ಕೆ ಸುಬ್ರಹ್ಮಣ್ಯನ ಭಕ್ತರ ಒತ್ತಾಯವಾಗಿದೆ.