


ಬೆಳ್ತಂಗಡಿ: ಕಳೆದ ಮೂರು ದಿನಗಳಿಂದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಒಂಬತ್ತು ತಿಂಗಳ ಹಿಂದೆ ಕೊಲೆಯಾಗಿದ್ದ ಬೆಂಗಳೂರಿನ ಯುವಕ ಶರತ್ ಮೃತದೇಹದ ಅವಶೇಷಗಳನ್ನು ಹುಡುಕುತ್ತಿದ್ದ ಪೊಲೀಸರು ಯಾವುದೇ ಸುಳಿವು ಸಿಗದೇ, ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.

10ಕ್ಕೂ ಹೆಚ್ಚು ಪೊಲೀಸರ ಜತೆ 20ಕ್ಕೂ ಹೆಚ್ಚು ಸ್ಥಳೀಯರ ನೇತೃತ್ವದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಜ.6 ರಂದು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗುವ ಕಾರಣ ಮೂರು ದಿನ ಶವ ಪತ್ತೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಜ.5 ರಂದು ಸಂಜೆ ಕಾರ್ಯಾಚರಣೆ ಸ್ವಗಿತಗೊಳಿಸಿ ಬೆಂಗಳೂರಿಗೆ ಇಬ್ಬರು ಆರೋಪಿಗಳಾದ ಶರತ್ ಮತ್ತು ಧನುಷ್ ನನ್ನು ಕರೆದುಕೊಂಡು ಹೋಗಿದ್ದಾರೆ. ಮತ್ತೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ಆರೋಪಿಗಳನ್ನು ಕರೆದುಕೊಂಡು ಬಂದು ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮತ್ತೆ ಶವಪತ್ತೆ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಏನಿದು ಪ್ರಕರಣ..?
ಬೆಂಗಳೂರಿನ ಕೋಣನಕುಂಟೆ ಮೂಲದ ಶರತ್ ಸಬ್ಸಿಡಿ ದರದಲ್ಲಿ ಕಾರು ಕೊಡಿ ಕೊಡಿಸುತ್ತೇನೆ ಎಂದು ಹಣ ಪಡೆದು ಕಾರು ಕೊಡಿಸದ ಹಿನ್ನೆಲೆಯಲ್ಲಿ ಹಣ ಕೊಟ್ಟವರು ಶರತ್ನನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೈದಿದ್ದರು.

ಕೊಲೆಗೈದ ಬಳಿಕ ಮೃತ ದೇಹವನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. ಒಂಬತ್ತು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮೃತ ದೇಹಕ್ಕಾಗಿ ಮೂರು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ನಡೆಸಿದ್ದರು. ಆದರೆ 9 ತಿಂಗಳು ಕಳೆದಿದ್ದರಿಂದ ಪೊಲೀಸರಿಗೆ ಮೃತದೇಹದ ಯಾವುದೇ ಕುರುಹುಗಳು ಸಹ ಪತ್ತೆಯಾಗಿಲ್ಲ. ಅಲ್ಲದೆ ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಬೇಕಾದ ಹಿನ್ನೆಲೆಯಲ್ಲಿ ಮೃತ ದೇಹವನ್ನು ಶೋಧಿಸುವ ಕಾರ್ಯಾಚರಣೆಗೆ ಬ್ರೇಕ್ ಹಾಕಿ ಬೆಂಗಳೂರಿಗೆ ಬರಿಗೈಲಿ ಹಿಂದಿರುಗಿದ್ದಾರೆ.

ಸಾವಿರಾರು ಅಡಿ ಪ್ರಪಾತ, ಲಕ್ಷಾಂತರ ಹೆಕ್ಟರ್ ಅರಣ್ಯ ಪ್ರದೇಶದಲ್ಲಿ 9 ತಿಂಗಳ ಹಿಂದಿನ ಮೃತ ದೇಹ ಹುಡುಕುವುದು ಕಲ್ಲನ್ನು ಗುದ್ದಿ ನೀರು ತೆಗೆದಂತೆ. ಅಲ್ಲಿ ಮೃತದೇಹ ಹುಡುಕುವುದು ಅಸಾಧ್ಯವೇ ಸರಿ. ಚಾರ್ಮಾಡಿಘಾಟ್ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿದ್ದು, ಅದರಲ್ಲೂ ಕಾಡುಹಂದಿ, ಸೀಳುನಾಯಿ ಪ್ರಮಾಣ ಹೆಚ್ಚಿದೆ. ಆರೋಪಿಗಳು ಕೊಲೆ ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ಹಾಕಿ ಎಸೆದಿದ್ದರೆ ಪೊಲೀಸರ ಬಳಿ ಹೇಳಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳು ಗೋಣಿಚೀಲವನ್ನು ಎಳೆದೊಯ್ದಿರುವ ಸಾಧ್ಯತೆಯೂ ಇದೆ. ಕೊಲೆ ಮಾಡಿ ಮೃತದೇಹವನ್ನು ರಾತ್ರಿ ಎಸೆದಿರುವುದರಿಂದ ಆರೋಪಿಗಳಿಗೂ ಯಾವ ಸ್ಥಳವೆಂಬುದು ಪಕ್ಕಾ ತಿಳಿಯುತ್ತಿಲ್ಲ. ಆದರೂ ಪೊಲೀಸರು ಮೂರು ದಿನಗಳ ಕಾಲ ನಿರಂತರವಾಗಿ ಹುಡುಕಿ ಇಂದು ಬೆಂಗಳೂರಿಗೆ ಬರಿಗೈಲಿ ವಾಪಸ್ಸಾಗಿದ್ದಾರೆ.









