



ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2024ನೇ ವರ್ಷದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿಯನ್ನು ಕೆ. ಜಿ. ಚಂದ್ರಶೇಖರ ಗೌಡ ಗಿರಿನಿವಾಸ ವಿಟ್ಲ ಮೂಡ್ನೂರು ಅವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ನಡೆದಕೃಷಿ ಮತ್ತು ತೋಟಗಾರಿಕೆ ಮೇಳ 2024 ರ ಸಂದರ್ಭದಲ್ಲಿ ನೀಡಿ ಗೌರವಿಸಿತು.

ಕೆ. ಜಿ. ಚಂದ್ರಶೇಖರ್ ರವರಿಗೆ 4 ಎಕರೆ ಸ್ವಂತ ಜಮೀನಿದ್ದು ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ಜಾಯಿ ಕಾಯಿ, ರಬ್ಬರ್, ಕಾಫಿ, ಕೊಕೋ, ವೆನಿಲ್ಲಾ, ವಿವಿಧ ತಳಿಯ ಹಣ್ಣಿನ ಕೃಷಿಯ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಡಿಕೆ ಮತ್ತು ಹಣ್ಣಿನ ಗಿಡಗಳ ನರ್ಸರಿಯನ್ನು ಮಾಡಿಕೊಂಡಿರುತ್ತಾರೆ. ಜಮೀನಿನ ಸುತ್ತಲಿನ ಬದುಗಳಲ್ಲಿ ರಬ್ಬರ್, ಹಣ್ಣಿನ ಗಿಡಗಳಾದ ಹಲಸು, ಮಾವು ಮತ್ತು ಅರಣ್ಯ ಮರಗಳಾದ ಸಾಗುವಾನಿ, ಮಹಾಗನಿ, ಕರಿಮರ ಇತ್ಯಾದಿ ಬೆಳೆದಿರುತ್ತಾರೆ.
ಇವರ ಜಮೀನಿನಲ್ಲಿ ಉತ್ತಮ ನೀರಾವರಿಗಾಗಿ ಹನಿ ನೀರಾವರಿ ಪದ್ಧತಿ, ಮಳೆ ನೀರು ಕೊಯ್ದು, ಬೋರ್ ವೆಲ್ ಮತ್ತು ಕೃಷಿ ಭೂಮಿಯಲ್ಲಿ ಕಂದಕಗಳ ರಚನೆ ಹಾಗೂ ರಬ್ಬರ್ ಗುಡ್ಡಗಳಲ್ಲಿ ಇಂಗು ಗುಂಡಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕೃಷಿಯಲ್ಲಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಬೆಳೆಗಳಲ್ಲಿ ಕೀಟ ಮತ್ತು ರೋಗ ನಿರ್ವಹಣೆಗೆ ಮೋಹಕ ಬಲೆಗಳನ್ನು ಬಳಸುತ್ತಾರೆ.
ಇವರು ವಿಟ್ಲದ ಐ.ಸಿ.ಎ.ಆರ್.ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ರೈತ ಸಂಪರ್ಕ ಕೇಂದ್ರ, ಹಾಗೂ ರೈತ ಉತ್ಪಾದಕರ ಸಹಕಾರಿ ಸಂಘ ಇವರೊಂದಿಗೆ ಸಂಪರ್ಕವನ್ನಿಟ್ಟು ಕೊಂಡಿದ್ದಾರೆ ಹಾಗೂ ವಿವಿಧ ಇಲಾಖೆಯಿಂದ ನಡೆಸುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಕೃಷಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ 2022-23 ನೇ ಸಾಲಿನ ಆತ್ಮಯೋಜನೆಯಡಿಬೆಳೆ ವೈವಿದ್ದೀಕರಣ ಹಾಗೂ ನರ್ಸರಿ ವಿಭಾಗದಲ್ಲಿ ಕೃಷಿ ಯೋಜನೆಯಡಿಯಲ್ಲಿ ತಾಲ್ಲೂಕು ಮಟ್ಟದ ‘ಶ್ರೇಷ್ಠ ಕೃಷಿಕ ಪ್ರಶಸ್ತಿ, ರಾಷ್ಟ್ರೀಯ ಹಬ್ಬಗಳ ಸಮಿತಿ ಬಂಟ್ವಾಳ 2024 ರ ನಾಡಪ್ರಭು ಕೆಂಪೇಗೌಡರ ಜನ್ಮದಿನದ ಕಾರ್ಯಕ್ರಮದಲ್ಲಿ ‘ಪ್ರಗತಿಪರ ಕೃಷಿಕ ಪ್ರಶಸ್ತಿ, ಶ್ರೀ ವಿಷ್ಣುಮೂರ್ತಿ ಯುವಕ ವೃಂದ ವಿಷ್ಣುನಗರ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ‘ಮಾದರಿ ಪ್ರಗತಿಪರ ಕೃಷಿಕ ಪ್ರಶಸ್ತಿ ಲಭಿಸಿದೆ ಹಾಗೂ ಎಂ.ಜಿ. ಆರ್ ಕಾರ್ಪೋರೇಶನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಚಟುವಟಿಕೆಗಾಗಿ ಮಾಡಿದ ವಿಶೇಷ ಸಾಧನೆಗೆ ಇವರನ್ನು ಗುರುತಿಸಿ ಸನ್ಮಾನಿಸಿದೆ.