ಮಂಗಳೂರು: ಮತಗಟ್ಟೆಗೆ ಮತ ಚಲಾಯಿಸಲು ಬರುವ ಮತದಾರರು ತಮ್ಮ ಮೊಬೈಲ್ ಫೋನ್ ತರುವುದನ್ನು ಜಿಲ್ಲಾಡಳಿತ ನಿಷೇಧಿಸಿದ್ದು ಮತಗಟ್ಟೆಗೆ ಮತ ಚಲಾಯಿಸಲು ಬರುವ ಮತದಾರರು ತಮ್ಮ ಮೊಬೈಲ್ ಫೋನ್ ತರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಏ.26ರ ಶುಕ್ರವಾರದಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗದ ನಿಯಮದಂತೆ ಮತದಾರರು ಮತ ಚಲಾಯಿಸಲು ಬರುವಾಗ ತಮ್ಮ ಮೊಬೈಲ್ ಫೋನ್ ತರುವಂತಿಲ್ಲ. ಮೊಬೈಲ್ ನೊಂದಿಗೆ ಮತಗಟ್ಟೆಗೆ ತೆರಳಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಮೊಬೈಲ್ ಮತದಾನ ಕೇಂದ್ರಕ್ಕೆ ತಂದರೆ ಅದನ್ನು ಸೇಫ್ ಡೆಪಾಸಿಟ್ ಮಾಡಲು ವ್ಯವಸ್ಥೆ ಮಾಡಲಾಗುವುದು. ಆದರೆ, ಅಲ್ಲಿ ಮತ್ತೊಂದು ಸರತಿ ಸಾಲು ಆಗುವ ಬದಲು ಮೊಬೈಲ್ ಅನ್ನು ಮನೆಯಲ್ಲಿಯೆ ಬಿಟ್ಟು ಬರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲಿಯೂ ಚುನಾವಣಾ ಬಹಿಷ್ಕಾರ ಇಲ್ಲ. ಕೆಲವೆಡೆ ಚುನಾವಣಾ ಬಹಿಷ್ಕಾರಕ್ಕೆ ಕರೆ ಕೊಡಲಾಗಿತ್ತು. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ರಸ್ತೆ ಮೊದಲಾದ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಅವರನ್ನು ಮನವೊಲಿಸಿ ಚುನಾವಣಾ ಬಹಿಷ್ಕಾರಕ್ಕೆ ಕರೆ ವಾಪಸ್ ಪಡೆಯಲಾಗಿದ್ದು, ಸದ್ಯ ಯಾವುದೇ ಚುನಾವಣಾ ಬಹಿಷ್ಕಾರ ಇಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯಾದ್ಯಂತ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್ಓಗಳು, 4,502 ಪಿಓಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿ ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.