ತಾಯಿಯೊಬ್ಬಳು ತನ್ನ ಒಂದು ವರ್ಷದ ಮಗುವನ್ನು ಬಸ್ ನಿಲ್ದಾಣದಲ್ಲಿದ್ದ ಅಪರಿಚಿತ ಅಜ್ಜಿಗೆ ಕೊಟ್ಟು ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಕಲಿಗೌಡನಹಳ್ಳಿಗೆ ತೆರಳಲು ಕುಳಿತಿದ್ದ ಮಹದೇವಮ್ಮ ಎಂಬ ಅಜ್ಜಿಯ ಬಳಿಗೆ ಬಂದ ಮಹಿಳೆಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಮಗುವನ್ನು ಕೊಟ್ಟು ಹೋದವಳು ಸುಮಾರು ಹೊತ್ತಾದರೂ ಬರಲಿಲ್ಲ ಎನ್ನಲಾಗಿದೆ. ಗಾಬರಿಗೊಂಡ ಮಹದೇವಮ್ಮ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಈ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಸಿಸಿ ಟಿವಿ ಪರಿಶೀಲಿಸಿದಾಗ ಹಳದಿ ಸೀರೆ ಧರಿಸಿದ ಮಹಿಳೆಯೊಬ್ಬರು ಮಗುವನ್ನು ಮಹದೇವಮ್ಮಗೆ ಕೊಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ. ಒಂದು ವರ್ಷದ ಹೆಣ್ಣು ಮಗುವನ್ನು ವಶಕ್ಕೆ ಪಡೆದ ಪೊಲೀಸರು ಮಹಿಳಾ ಕಲ್ಯಾಣ ಸಮಿತಿಯ ಸೂಚನೆ ಮೇರೆಗೆ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಬಾಲ ಮಂದಿರದಲ್ಲಿ ದಾಖಲಿಸಿದ್ದಾರೆ .