ತಂದೆಯೇ ತನ್ನ ಸ್ವಂತ ಮಗನನ್ನು ಹತ್ಯೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಮಾಕೋಡು ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನಿಷ್ಕರುಣಿ ಪಾಪಿ ತಂದೆ ಗಣೇಶ್ ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಂದಿದ್ದಾನೆ.
ಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದ ಗಣೇಶ್ ಆಕೆಯಿಂದ ಮೂರು ಮಕ್ಕಳನ್ನು ಪಡೆದಿದ್ದನು. ದಂಪತಿಗಳು ಬೆಂಗಳೂರಿನ ದೊಡ್ಡಸನ್ನೆ ಗ್ರಾಮದಲ್ಲಿ ವಾಸವಿದ್ದರು. ಮೂರನೇ ಮಗುವಿನ ಹೆರಿಗೆ ಸಮಯದಲ್ಲಿ ಲಕ್ಷ್ಮೀ ಸಾವನ್ನಪ್ಪಿದ್ದಳು.
ಎರಡು ಹೆಣ್ಣು ಮಕ್ಕಳನ್ನು ಲಕ್ಷ್ಮಿ ತಾಯಿ ಅಂಜನಮ್ಮ ನೋಡಿಕೊಳ್ಳುತ್ತಿದ್ದರು. ಗಣೇಶ್ ಮೂರನೇ ಗಂಡು ಮಗುವನ್ನ ನಾನು ಕೊಡುವುದಿಲ್ಲ ಅಂತ ಹೇಳಿ ತಾನೇ ಸಾಕುತ್ತಿದ್ದನು. ಹೆಂಡತಿ ಸತ್ತ ಬಳಿಕ ಊರಿಗೆ ಹಿಂತಿರುಗಿದ ಗಣೇಶ್ ತನ್ನ ತಾಯಿ ಜೊತೆ ವಾಸವಾಗಿದ್ದನು. ಹೀಗಿರುವಾಗ ಮಗುವಿನ ಹಾರೈಕೆಯನ್ನು ತಾಯಿ ಹೆಗಲಿಗೆ ಹೊರಿಸಿದ್ದನು.
ನಾಲ್ಕು ದಿನಗಳ ಹಿಂದೆ ಗಣೇಶ್ ತನ್ನ ತಾಯಿ ಜೊತೆ ಜಗಳವಾಡಿಕೊಂಡು ಮಗು ತೆಗೆದುಕೊಂಡು ಹೋಗಿದ್ದನು. ಬಳಿಕ ಕೆರೆಯಲ್ಲಿ ಬಿಸಾಡಿ ಕೊಲೆಗೈದಿದ್ದಾನೆ. ಈ ಸಂಬಂಧ ಗಣೇಶ್ ಅತ್ತೆ ಅಂಜನಮ್ಮ ಅವರಿಂದ ದೂರು ದಾಖಲಾಗಿದ್ದು, ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.