


ಬೆಳ್ತಂಗಡಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕು, ಕುದ್ಯಾಡಿ ಗ್ರಾಮದ ಪಿಲ್ಯ ಎಂಬಲ್ಲಿ ಸೋಮವಾರ (ಮೇ 13) ಮಧ್ಯಾಹ್ನ ಬೆಳಕಿಗೆ ಬಂದಿದೆ.
ಪಿಲ್ಯ ನಿವಾಸಿ ನೀತಾ (34) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ನೀತಾ ಅವರು ಮೇ 11 ರಂದು ಮನೆಗೆ ಬಾಗಿಲು ಹಾಕಿ ತವರು ಮನೆಗೆ ಹೋಗಿದ್ದು, ಮೇ 13 ರ ಮಧ್ಯಾಹ್ನ ಮನೆಯ ಬೀಗ ಒಡೆದಿರುವ ಬಗ್ಗೆ ನೆರೆಮನೆಯವರು ನೀಡಿ ಮಾಹಿತಿಯಂತೆ ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಗೋಡ್ರೆಜ್ ಬೀಗ ಮುರಿದು ಅದರಲ್ಲಿದ್ದ 1.98 ಲಕ್ಷ ರೂಪಾಯಿ ಮೌಲ್ಯದ 33 ಗ್ರಾಂ ಚಿನ್ನಾಭರಣ ಹಾಗೂ 40 ಸಾವಿರ ರೂಪಾಯಿ ನಗದು ಹಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ನಗ-ನಗದಿನ ಒಟ್ಟು ಮೌಲ್ಯ 2.38 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 45/2024 ಕಲಂ : 454,457,380 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.