


ಶಿವಮೊಗ್ಗ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಭುವನೇಶ್ವರಿ (52), ಭುವನೇಶ್ವರಿ ಸಹೋದರ ಮಾರುತಿ (28) ಭುವನೇಶ್ವರಿ ಮಗ ದರ್ಶನ್ (22) ಎಂದು ಗುರುತಿಸಲಾಗಿದೆ.
ಭುವನೇಶ್ವರಿ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಸಹೋದರ ಮಾರುತಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಭಾನುವಾರ ಎಂದಿನಂತೆ ಎಲ್ಲರೂ ಕೆಲಸ ಮಾಡಿಕೊಂಡು ಮನೆಗೆ ಬಂದಿದ್ದರು. ರಾತ್ರಿಯೇ ಮೂರು ಮಂದಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಂಬಂಧಿಕರು ಕರೆ ಮಾಡಿದಾಗ ಯಾರೊಬ್ಬರು ಸ್ವೀಕರಿಸಿರಲಿಲ್ಲ. ಕೆಲಸಕ್ಕೂ ಹೋಗಿರಲಿಲ್ಲ. ಹಾಗಾಗಿ ಮನೆ ಬಳಿ ಆಕೆಯ ಮತ್ತೊಬ್ಬ ಸಹೋದರ ಬಂದು ಬಾಗಿಲು ತೆರೆದು ನೋಡಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ವಿಷಯ ತಿಳಿದು ದೊಡ್ಡಪೇಟೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದರು. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.