ಕುಟುಂಬದ ಸದಸ್ಯರು ಮನೆಯ ಹಿರಿಜೀವ ಕಳೆದುಕೊಂಡ ದುಃಖದಲ್ಲಿದ್ದರು. ಬೆಂಗಳೂರಿನಿಂದ ಸಿರುಗುಪ್ಪಕ್ಕೆ ಅಜ್ಜಿಯ ಮೃತದೇಹವನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಕಾರಿನ ಟೈಯರ್ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೃತಪಟ್ಟವನ್ನು ಬಳ್ಳಾರಿಯ ಸಿರುಗುಪ್ಪ ತಾಲೂಕಿನ ದೇಸನೂರು ಮೂಲದ ಸುರೇಶ್ (40) , ಮಲ್ಲಿಕಾರ್ಜುನ (25), ಭೂಮಿಕ (9) ಹಾಗೂ ಗಾಯಾಗೊಂಡವರನ್ನು ನಾಗಮ್ಮ (31), ತಾಯಮ್ಮ (56), ಧನರಾಜ್ (39) ಹಾಗೂ ಚಾಲಕ ಶಿವು (26) ಎಂದು ಗುರುತಿಸಲಾಗಿದೆ.
ಸುರೇಶ್ ಅವರ ಅಜ್ಜಿ ಹುಲಿಗಮ್ಮ (66) ಬೆಂಗಳೂರಲ್ಲಿ ಮೃತಪಟ್ಟಿದ್ದರು. ಶವ ಸಂಸ್ಕಾರಕ್ಕಾಗಿ ಬೆಂಗಳೂರಿನಿಂದ ದೇಸನೂರಿಗೆ ಸುರೇಶ್ ಕುಟುಂಬ ತೆರಳುತಿದ್ದಾಗ ಕಾರಿನ ಟೈಯರ್ ಒಮ್ಮೆಲೆ ಸ್ಫೋಟಗೊಂಡಿತ್ತು, ವೇಗವಾಗಿ ಇದ್ದರಿಂದ ಚಾಲಕನ ನಿಯಂತ್ರಣಕ್ಕೆ ಸಿಗದೇ ಪಲ್ಟಿಯಾಗಿತ್ತು. ಕಾರಿನಿಂದ ಬಿದ್ದ ಮೂವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಜೀವ ಬಿಟ್ಟರೆ, ಮತ್ತೆ 4 ಮಂದಿಯ ಸ್ಥಿತಿ ಗಂಭೀರವಾಗಿದೆ.
ಗಂಭೀರ ಗಾಯಾಗೊಂಡವರನ್ನು ರಾಂಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪಿಎಸ್ಐ ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರಾಂಪುರದ ಗ್ರ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.