ಜೈಪುರ: ಟ್ರಕ್ ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಿರೂಪಕಿ ಸೇರಿದಂತೆ ಮೂವರು ಸಾವನ್ನಪ್ಪಿರೋ ಘಟನೆ ರಾಜಸ್ಥಾನದ ಚಿತ್ತೋಡಗಢ ಜಿಲ್ಲೆಯ ಗಂಗಾನಗರದ ಬಳಿ ನಡೆದಿದೆ.
ವೀರೇಂದ್ರ, ಆಶೀಷ್ ಮತ್ತು ಶಹಜಾದ್ ಉರ್ಫ್ ಖುಷ್ಬೂ ಮೃತರು. ಶಹಜಾದ್ ಖಾಸಗಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿಕೊಂಡಿದ್ರೆ, ಬೈಕ್ ಸವಾರ ವೀರೇಂದ್ರ ಡಿಜೆ ಸೌಂಡಿಂಗ್ ಮಾಡಿಕೊಂಡಿದ್ದನು. ಇನ್ನೋರ್ವ ವೀರೇಂದ್ರ ಗೆಳೆಯನಾಗಿದ್ದು ಮೂವರು ಚಿತ್ತೋಡಗಢಗೆ ತೆರಳುತ್ತಿದ್ದರು.
ಗಂಗಾನಗರದ ಚತುಷ್ಪತ ಹೆದ್ದಾರಿಯಲ್ಲಿ ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೀರೇಂದ್ರ ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಶಹಜಾದ್ ಮತ್ತು ಆಶೀಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೂವರು ಬಿಲ್ವಾಡದ ನಿವಾಸಿಗಳಾಗಿದ್ದು, 22 ರಿಂದ 25 ವರ್ಷದೊಳಗಿನವರು ಎಂದು ವರದಿಯಾಗಿದೆ.
ಅಪಘಾತದ ಬಳಿಕ ಮೂರು ಮೃತದೇಹಗಳ ಬೇರೆ ಬೇರೆ ಆಸ್ಪತ್ರೆಗಳಲ್ಲಿರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಅಪಘಾತದ ಬಳಿಕ ಟ್ರೇಲರ್ ಚಾಲಕ ಪರಾರಿಯಾಗಿದ್ದಾನೆ.