ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದು, ಆದರೆ ಈ ಹೊಗೆಯಿಂದ ಇಡೀ ಮನೆಯೇ ಭಸ್ಮವಾದ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ.
ಉತ್ತರಪ್ರದೇಶದ ಬಂದ ಎಂಬಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ನೆಲೆಸಿದ್ದರು. ಬೆಳಗ್ಗೆ 10 ಗಂಟೆಯ ವೇಳೆಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು ಸೇರಿಕೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಮನೆ ಮಂದಿಗೆ ಈ ವಿಚಾರ ತಿಳಿಸಿದ್ದು, ಎಲ್ಲರೂ ಸೇರಿ ಹಾವನ್ನು ಓಡಿಸುವುದಕ್ಕೆ ಹರಸಾಹಸಪಟ್ಟಿದ್ದಾರೆ.
ಆದರೂ ಕೂಡ ಹಾವು ಮಾತ್ರ ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರಂತೆ. ಆದರೆ, ಈ ಹೊಗೆಯಿಂದ ಇಡೀ ಮನೆ ಸಂಪೂರ್ಣ ಬೆಂಕಿ ಹಬ್ಬಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದು ಖಾಕಿ ಪಡೆ, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದು, ಆದರೆ ಅಷ್ಟರಲ್ಲಿ ಮನೆಯಲ್ಲಿದ್ದ ನಗದು, ಚಿನ್ನಾಭರಣ ಮಾತ್ರವಲ್ಲದೇ ಹಲವಾರು ಕ್ವಿಂಟಾಲ್ ಇದ್ದ ಧಾನ್ಯಗಳು ಭಸ್ಮವಾಗಿಬಿಟ್ಟಿದೆ.