ಬಂಟ್ವಾಳ: ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟುನಲ್ಲಿ ನಡೆದ ‘ತುಳು ಲಿಪಿ ಬಲೇ ತುಳು ಲಿಪಿ ಕಲ್ಪುಗ’ ತರಬೇತಿಯಲ್ಲಿ ಪಾಲ್ಗೊಂಡು ರವಿವಾರ ತುಳು ಲಿಪಿ ಪರೀಕ್ಷೆ ಬರೆಯುವ ಮೂಲಕ 72 ವರ್ಷದ ಲಕ್ಷ್ಮೀ ಅಮ್ಮ ಅವರು ಎಲ್ಲರ ಗಮನ ಸೆಳೆದಿದ್ದಾರೆ.
ಭಂಡಾರಿಬೆಟ್ಟಿನ ಯುವಜನ ವ್ಯಾಯಮ ಶಾಲೆ, ತುಳು ಸಾಹಿತ್ಯ ಅಕಾಡೆಮಿ ಹಾಗೂ ಜೈ ತುಳುನಾಡ್ ಸಂಘಟನೆಯ ವತಿಯಿಂದ ನಾಲ್ಕು ವಾರಗಳಿಂದ ತರಬೇತಿ ನಡೆದಿದ್ದು, ರವಿವಾರ ತರಬೇತಿ ಪಡೆದವರು ಪರೀಕ್ಷೆ ಬರೆದರು.
ಯುವ ತಲೆಗಳ ಜತೆಗೆ ಪಾಣೆಮಂಗಳೂರು ನಿವಾಸಿ ನಿವೃತ್ತ ಶಿಕ್ಷಕಿ ಎನ್.ಬಿ.ಲಕ್ಷ್ಮೀ ಅಮ್ಮ ಕೂಡ ತುಳು ಲಿಪಿ ಪರೀಕ್ಷೆ ಬರೆದಿದ್ದಾರೆ. ಲಕ್ಷ್ಮೀ ಅಮ್ಮ ಅವರು ಆನ್ಲೈನ್ ಮೂಲಕ ತರಬೇತಿ ಪಡೆದು ಪರೀಕ್ಷೆ ಬರೆದಿದ್ದಾರೆ.
ಸುಮಾರು 30 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ತುಲು ಲಿಪಿ ಶಿಕ್ಷಕರಾದ ಜಗದೀಶ್ ಗೌಡ ಕಲ್ಕಳ, ಭವಿತಾ ಗೌಡ ಹಾಗೂ ಪೂರ್ಣಿಮಾ ಅವರು ತರಬೇತಿ ನೀಡಿ ಪರೀಕ್ಷೆ ನಡೆಸಿದ್ದಾರೆ.
ನಾಲ್ಕು ವಾರಗಳ ತರಬೇತಿ ಬಳಿಕ ಮಾ. 14ರಂದು ಪರೀಕ್ಷೆ ನಡೆಸಿದ್ದೇವೆ. ಯುವ ವಿದ್ಯಾರ್ಥಿಗಳ ಜತೆಗೆ ಲಕ್ಷ್ಮೀ ಅಮ್ಮ ಕೂಡ ಪರೀಕ್ಷೆ ಬರೆದಿರುವುದು ಹೆಮ್ಮೆಯ ವಿಚಾರ. ಅದು ನಮ್ಮ ತುಳು ಭಾಷಾಭಿಮಾನವನ್ನು ತೋರಿಸುತ್ತದೆ ಎಂದು ತರಬೇತುದಾರರು ತಿಳಿಸಿದ್ದಾರೆ.