ಗಸ್ತು ತಿರುಗುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ ಪರಿಣಾಮ ರಾಜ್ಯದ ಓರ್ವ ಸೈನಿಕ ಸೇರಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ತ್ರಿಪುರದ ಧಲೈ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಗೆ ನಮ್ಮ ಸೈನಿಕರಿಬ್ಬರು ಸಾವನ್ನಪ್ಪಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಯೋಧ ರಾಜಕುಮಾರ ಎಂ ಮಾವಿನ್ ಹುತಾತ್ಮ ಯೋಧ. ಯೋಧ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಚಿಂಚನಸೂರು ಗ್ರಾಮ ನೀರವ ಮೌನಕ್ಕೆ ಜಾರಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೂಲಗಳ ಪ್ರಕಾರ ನಾಡಿದ್ದು ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ. ಸಬ್ಇನ್ಸ್ಪೆಕ್ಟರ್ ಭುರು ಸಿಂಗ್ ಮತ್ತೋರ್ವ ಹುತಾತ್ಮ ಯೋಧ ಎಂದು ಗುರುತಿಸಲಾಗಿದೆ.
ಧಲೈನ ಚಮ್ಮನು ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಸಿ ನಾಥ್ ಬಾರ್ಡರ್ ಔಟ್ಪೋಸ್ಟ್ನಲ್ಲಿ ಗಸ್ತು ತಿರುಗುತ್ತಿದ್ದಾಗ ಉಗ್ರರು ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಯೋಧರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ದಾಳಿ ಹಿಂದೆ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ ಸಂಘಟನೆಯ ಕೈವಾಡದ ಶಂಕೆ ವ್ಯಕ್ತವಾಗಿದೆ.
ತ್ರಿಪುರಾ ಪೊಲೀಸ್ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್, ಅರಿಂದಮ್ ನಾಥ್ ನೀಡಿರುವ ಮಾಹಿತಿ ಪ್ರಕಾರ ಉಗ್ರರು ಫೈರಿಂಗ್ ನಡೆಸಿದ ಕೆಲ ಸಮಯದ ಬಳಿಕ ಬಾಂಗ್ಲಾದೇಶದ ಗಡಿಯನ್ನ ದಾಟಿ ಕಣ್ಮರೆಯಾಗಿದ್ದಾರೆ ಎಂದಿದ್ದಾರೆ. ಇನ್ನು ಈ ಘಟನೆಯನ್ನು ತ್ರಿಪುರಾ ಸಿಎಂ ಬಿಪ್ಲಾಪ್ ಕುಮಾರ್ ಡೆಬ್ ಖಂಡಿಸಿದ್ದಾರೆ.