ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಭಯ್(16), ಮಾಲತೇಶ್(27) ಮೃತ ದುರ್ದೈವಿಗಳು.
ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದ ಹೊಲದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದವು. ಈ ವೇಳೆ ಬಾಲಕ ಅಭಯ ಕೂಡ ಇಂದು ಪೋಷಕರ ಹೊಲದಲ್ಲಿ ಕೃಷಿ ಕೆಲಸಕ್ಕೆ ಸಹಾಯ ಮಾಡಲು ತೆರಳಿದ್ದನು. ಈ ವೇಳೆ ಅಭಯಗೆ ಬಾಯಾರಿಕೆಯಾಗಿದ ಹಿನ್ನಲೆಯಲ್ಲಿ ಆತ ಕೃಷಿ ಹೊಂಡದಲ್ಲಿರುವ ನೀರು ಕುಡಿಯಲು ಮುಂದಾಗಿದ್ದಾನೆ. ಅಭಯ ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ನೀರು ಪಾಲಾಗಿದ್ದಾನೆ. ಇದನ್ನೂ ದೂರದಲ್ಲಿ ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಹದಗೊಳಿಸುತ್ತಿದ್ದ ಮಾಲತೇಶ್ ಯುವಕನು ನೋಡಿದ್ದಾನೆ.
ಆತ ಕೂಡಲೇ ಕೃಷಿ ಹೊಂಡದ ಬಳಿ ಬಂದು, ಅಭಯ್ ನ ಬಚಾವ್ ಮಾಡಲು ಹೋಗಿದ್ದ ಮಾಲತೇಶ್ ಕೂಡ ಕೃಷಿ ಹೊಂಡದಲ್ಲಿ ಬಿದ್ದು, ಇಬ್ಬರು ನೀರು ಪಾಲಾಗಿದ್ದಾರೆ. ಇದನ್ನು ನೋಡಿದ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು ಅಲ್ಲಿಗೆ ದೌಡಾಯಿಸಿದ್ದಾರೆ. ಆದರೆ ಇಬ್ಬರ ಜೀವ ಆಗಲೇ ಹೋಗಿಬಿಟ್ಟಿತ್ತು.
ನೀರು ಪಾಲಾಗಿದ್ದ ಇಬ್ಬರ ಶವವನ್ನು ಗ್ರಾಮಸ್ಥರೇ ಮೇಲೆಯೆತ್ತಿದ್ದಾರೆ. ಇಬ್ಬರ ಸಾವು ನೋಡಿದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕನ ಬಚಾವ್ ಮಾಡಲು ತೆರಳಿದ್ದ ಮಾಲತೇಶ್ನ ಮದುವೆಯಾಗಿ ಕೇವಲ ಒಂದು ವರ್ಷ ಆಗಿದೆ. ಅಭಯನ ಜೀವ ಉಳಿಸಲು ಹೋಗಿ ಮಾಲತೇಶ್ ತನ್ನ ಜೀವ ಕಳೆದುಕೊಂಡಿದ್ದಾನೆ. ಮಾಲತೇಶ್ ಪತ್ನಿಗೆ ಪತಿ ಸಾವು ದೊಡ್ಡ ಶಾಕ್ ನೀಡಿದೆ.