ಉಡುಪಿ: ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠದಲ್ಲಿ ತುಳು ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆಯಲಾದ ಹೊಸ ಫಲಕವೊಂದು ಭಾಷೆಗೆ ಸಂಬಂಧಿಸಿದಂತೆ ವಿವಾದವನ್ನು ಹುಟ್ಟುಹಾಕಿದೆ.
ಉಡುಪಿಯ ಕೃಷ್ಟ ಮಠದ ಮಹಾದ್ವಾರದಲ್ಲಿ ಈ ವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿದ್ದ ಫಲಕವನ್ನು ತೆಗೆದು ಈಗ ಹೊಸದಾಗಿ ತುಳು ಮತ್ತು ಸಂಸ್ಕೃತದಲ್ಲಿ ಶ್ರೀ ಕೃಷ್ಟ ಮಠ, ರಜತಪೀಠ ಪುರಂ ಎಂದು ಬರೆಯಲಾಗಿದೆ. ಪರ್ಯಾಯ ಅದಮಾರು ಮಠದಿಂದ ಫಲಕ ಬದಲಾವಣೆ ನಡೆದಿದ್ದು ಫಲಕದಲ್ಲಿ ಕನ್ನಡ ಭಾಷೆ ಏಕಿಲ್ಲ ಎನ್ನುವುದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರು ಅಡಿಗ ಅವರು ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ನನ್ನು ತೆಗೆದು ಹಾಕಿದ್ದು ಸರಿಯಾದ ಕ್ರಮವಲ್ಲ ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡ ಕ್ಕೆ ಆಧ್ಯತೆ. ನಾಮಫಲಕ ದಲ್ಲಿ ಮೊದಲು ಕನ್ನಡ ಇರಬೇಕು ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ.ನಾಮ ಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸೃಷ್ಟ ಉಲ್ಲಂಘನೆಯಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದ ಇದನ್ನು ಸರಿಪಡಿಸುವ ವರೆಗೂ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಉಡುಪಿ ಶ್ರೀಕೃಷ್ಣ ಮಠದಿಂದ ಸ್ಪಷ್ಟನೆ ದೊರೆತಿದ್ದು ಮಠದ ದುರಸ್ತಿ ಸಂದರ್ಭದಲ್ಲಿ ಸ್ವಾಮೀಜಿ ಅಭಿಮತದಂತೆ ಪ್ಲಾಸ್ಟಿಕ್ನಲ್ಲಿದ್ದ ಬೋರ್ಡಿನ ಬದಲು ಮರದ ಬೋರ್ಡ್ ಹಾಕುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಮೊದಲು ಕನ್ನಡ, ನಂತರ ಸಂಸ್ಕೃತ ಮತ್ತು ತುಳು ಲಿಪಿ ಬೋರ್ಡ್ಗಳನ್ನು ಹಾಕಲು ಯೋಜಿಸಲಾಗಿತ್ತು . ಆದರೆ ಬೋರ್ಡ್ ತಯಾರು ಮಾಡುವ ಸಂದರ್ಭದಲ್ಲಿ ಲಕ್ಷದೀಪ ಪ್ರಾರಂಭವಾದ ಕಾರಣ ಕನ್ನಡ ಬೋರ್ಡ್ ಸಿದ್ಧವಾಗಲು ವಿಳಂಬವಾಗಿದೆ. ಆದುದರಿಂದ ಈಗಾಗಲೇ ತಯಾರಾದ ಸಂಸ್ಕೃತ ಮತ್ತು ತುಳು ಭಾಷೆಯ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಮುಂದೆ ಕನ್ನಡ ಭಾಷೆಯ ಬೋರ್ಡ್ನ್ನು ಕೂಡ ಅಳವಡಿಸಲಾಗುವುದು ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.