ಮಂಗಳೂರು: ನಗರದ ನರ್ಸಿಂಗ್ ಕಾಲೇಜೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ತಮ್ಮ ಅಪಾರ್ಟ್ ಮೆಂಟ್ ನ ಕೊಠಡಿಯಲ್ಲಿ ಅಕ್ರಮ ಬಂಧನದಲ್ಲಿಟ್ಟು ಗಡ್ಡ ಬೋಳಿಸಿ, ಹಣ ನೀಡುವಂತೆ ಪೀಡಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿ ರ್ಯಾಗಿಂಗ್ ನಡೆಸಿದ ಆರೋಪದಲ್ಲಿ 9 ಮಂದಿಯನ್ನು ಪಾಂಡೇಶ್ವರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತರು ಅಭಿ, ಅಲೆಕ್ಸ್, ನಂದು, ಶ್ರೀಕುಮಾರ್, ಶಿಹಾಸ್, ಪ್ರವೀಶ್, ಗೋಪಿಕೃಷ್ಣ, ಹಸನ್, ವಿಷ್ಣು, ಜಾಸಿಲ್, ಅಲೆನ್ ಎನ್ನಲಾಗಿದೆ. ಈ ಪೈಕಿ 7 ಮಂದಿ ಗಾಂಜಾ ಸೇವನೆ ಮಾಡಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ದೃಢಪಟ್ಟಿದೆ. ಬಂಧಿತರಲ್ಲಿ ಓರ್ವ ಸಂತ್ರಸ್ತ ವಿದ್ಯಾರ್ಥಿಗಳ ಸೀನಿಯರ್, 7 ಮಂದಿ ಬೇರೊಂದು ಕಾಲೇಜಿನ ವಿದ್ಯಾರ್ಥಿಗಳು ,ಹಾಗೂ ಮತ್ತೋರ್ವ ಬಂಧಿಸಲ್ಪಟ್ಟವರು.
ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ ಅಮಲ್ ಗಿರೀಶ್ ಸ್ನೇಹಿತ ಕಾರ್ತಿಕ್ ವಿಜಯನ್ ಎಂಬ ಇಬ್ಬರು ವಿದ್ಯಾರ್ಥಿಗಳು ಅತ್ತಾವರದ ಡಿ ಮಾರ್ಟ್ನಿಂದ ಫಳ್ನೀರ್ನಲ್ಲಿರುವ ಅಪಾರ್ಟ್ಮೆಂಟ್ಗೆ ಶುಕ್ರವಾರ ರಾತ್ರಿ 7.30ರ ವೇಳೆಗೆ ಹೋಗುತ್ತಿದ್ದಾಗ ಆರೋಪಿಗಳ ಎದುರು ಸಿಕ್ಕಿದ್ದರು.
ಇಬ್ಬರನ್ನು ಅವರ ರೂಮಿಗೆ ಬಲವಂತವಾಗಿ ಕರೆದುಕೊಂಡು ಹೋಗಿ ಹಿಂಸಿಸಿ, ಗಡ್ಡವನ್ನು ಬೋಳಿಸಿದ್ದಾರೆ. ಬಳಿಕ ಹಣ ನೀಡುವಂತೆ ಒತ್ತಾಯಿಸಿದ್ದಲ್ಲದೇ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 270 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೆಲ್ಮೆಟ್ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದರು.
ಪಾಂಡೇಶ್ವರ ಠಾಣೆ ಇನ್ಸ್ಪೆಕ್ಟರ್ ಲೋಕೇಶ್ ಎ.ಸಿ. ಹಾಗು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಶೀತಲ್ ಅಲಗೂರ್ ಅವರು ಸಿಬ್ಬಂದಿ ಜತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.