ಉಳ್ಳಾಲ: ಅವಿವಾಹಿತರೊಬ್ಬರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಮಾಡೂರು ಅಯ್ಯಪ್ಪ ಭಜನಾ ಮಂದಿರ ಸಮೀಪದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮಾಡೂರು ಅಯ್ಯಪ್ಪ ಭಜನಾ ಮಂದಿರ ಸಮೀಪ ನಿವಾಸಿ ನಾಗರಾಜ್ ಶೆಟ್ಟಿ (32) ಎಂದು ಗುರುತಿಸಲಾಗಿದೆ.
ಕೋಟೆಕಾರು ಬೀರಿಯಲ್ಲಿರುವ ಈಕಾಟ್೯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ನಾಗರಾಜ್ ಮಂಗಳವಾರ ಕೆಲಸಕ್ಕೆ ತೆರಳಿ ರಾತ್ರಿ ಕೋಣೆಯಲ್ಲಿ ಮಲಗಿದವರು ಕೃತ್ಯ ಎಸಗಿದ್ದಾರೆ. ಇವರ ಸಹೋದರಿಯ ಪ್ರಸವ ಹಿನ್ನೆಲೆಯಲ್ಲಿ ತಾಯಿ ಆಕೆಯ ಮಂಗಳೂರಿನ ಮನೆಯಲ್ಲಿದ್ದು, ಕಿರಿಯ ಸಹೋದರ ಹಾಗೂ ದೊಡ್ಡಮ್ಮ ಮನೆಯಲ್ಲಿದ್ದರು. ಬೆಳಿಗ್ಗೆ ಕೋಣೆ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿ ಮನೆಮಂದಿ ಬಾಗಿಲು ಒಡೆದು ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಚೆಂಬುಗುಡ್ಡೆ ಸೇವಂತಿಗುಡ್ಡೆಯಲ್ಲಿ ನೆಲೆಸಿದ್ದ ಕುಟುಂಬ ಐದು ವರ್ಷಗಳ ಹಿಂದಷ್ಟೇ ಮಾಡೂರು ಸಮೀಪ ಮನೆಯನ್ನು ಖರೀದಿಸಿ ನೆಲೆಸಿದ್ದರು. ಕಿರಿಯ ಸಹೋದರನಿಗೂ ವಿವಾಹ ನಿಶ್ಚಯವಾಗಿದ್ದು, ನಾಗರಾಜ್ ಮಾತ್ರ ವಿವಾಹವಾಗುವುದಿಲ್ಲ ಎಂದು ಉಳಿದಿದ್ದರು. ಆರ್ಥಿಕ ಅಡಚಣೆ ಕೃತ್ಯಕ್ಕೆ ಕಾರಣವಾಗಿರಬಹುದು ಅನ್ನುವ ಸಂಶಯ ವ್ಯಕ್ತಪಡಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.