ಉಪ್ಪಿನಂಗಡಿ: ಸಾರ್ವಜನಿಕ ಮೈದಾನದಲ್ಲಿ ಗುಂಪೊಂದು ಆಟವಾಡುತ್ತಿದ್ದಾಗ ಮೈದಾನಕ್ಕೆ ಸೈಕಲ್ ಸವಾರಿ ಮಾಡಿಕೊಂಡು ತೆರಳಿದ ಇಬ್ಬರು ಮಕ್ಕಳನ್ನು ಆ ಗುಂಪು ಮೈದಾನಕ್ಕೆ ಬಾರದಂತೆ ಬೆದರಿಸಿ, ಓಡಿಸಿದ ಘಟನೆ 34 ನೆಕ್ಕಿಲಾಡಿಯ ಮೈಂದಡ್ಕ ಮೈದಾನದಲ್ಲಿ ಸೋಮವಾರ ಸಂಜೆ ನಡೆದಿರುವ ಬಗ್ಗೆ ಮಕ್ಕಳ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸ್ ದೂರು ನೀಡಿದ ಫ್ರಾನ್ಸಿಸ್ ಅನಿಲ್ ಮಿನೇಜಸ್ ಅವರು ತನ್ನ ಮನೆ ಸಮೀಪ ಕುಮ್ಕಿ ಜಾಗವಿದ್ದು, ಅದರ ಬದಿಯಲ್ಲಿಯೇ ಮೈಂದಡ್ಕ ಎಂಬಲ್ಲಿ ಸಾರ್ವಜನಿಕ ಆಟದ ಮೈದಾನವಿದೆ. ನಿನ್ನೆ ಸಂಜೆ ತನ್ನ ಏಳರ ಹರೆಯದ ಮಗ ಹಾಗೂ 12ರ ಹರೆಯದ ಮಗಳು ಸೈಕಲ್ ಸವಾರಿ ಮಾಡುತ್ತಾ ಈ ಸಾರ್ವಜನಿಕ ಮೈದಾನಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲಿ ಮಂಜು, ಹರೀಶ್ಚಂದ್ರ, ಪ್ರದೀಪ್, ಪ್ರಶಾಂತ್, ಸುದರ್ಶನ್, ಬಾಬು ಮೂಲ್ಯ, ಮಂಜು, ಲೋಕೇಶ್ ದರ್ಬೆ ಸೇರಿದಂತೆ ಸುಮಾರು 30ರಷ್ಟು ಮಂದಿಯಿದ್ದ ಗುಂಪು ಆಟವಾಡುತ್ತಿತ್ತು. ಆ ಗುಂಪಿನಲ್ಲಿದ್ದವರು ಸಾರ್ವಜನಿಕ ಮೈದಾನಕ್ಕೆ ತೆರಳುವ ದಾರಿಯನ್ನು ಬಂದ್ ಮಾಡಿ, ಅದಕ್ಕೆ ಅಡ್ಡವಾಗಿ ಗಿಡಗಳನ್ನು ನೆಟ್ಟಿದ್ದರು. ಈ ಗಿಡಗಳ ಮಧ್ಯೆ ಮಕ್ಕಳು ಸೈಕಲ್ ಸವಾರಿ ಮಾಡಿದ್ದರೆಂದು ಕೋಪಗೊಂಡು ಮಕ್ಕಳನ್ನು ಇನ್ನು ಮೈದಾನಕ್ಕೆ ಬಂದರೆ ಜಾಗೃತೆ ಎಂದು ಬೆದರಿಸಿ ಅಲ್ಲಿಂದ ಓಡಿದ್ದಾರೆ. ಅಲ್ಲದೇ, ಮಕ್ಕಳಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವರು ಭಯಭೀತರಾಗುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.











