ಉಪ್ಪಿನಂಗಡಿ: ಓವರ್ ಟೇಕ್ ಮಾಡುವ ವಿಚಾರದಲ್ಲಿ ಜಗಳ ನಡೆದು ಆಟೋ ರಿಕ್ಷಾ ಚಾಲಕ ಮೇಲೆ ಕೇರಳ ನೋಂದವಣೆಯ ಕಾರೊಂದರಲ್ಲಿ ಬಂದ ತಂಡ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.
ಶಿರಾಡಿ ಗ್ರಾಮದ ಪೆರಮಜಲು ನಿವಾಸಿ ವಿಶ್ವನಾಥ ಬಿ (40) ಹಲ್ಲೆಗೊಳಗಾದ ಆಟೋ ಚಾಲಕ ಎನ್ನಲಾಗಿದೆ.
ಅಡ್ಡಹೊಳೆಯ ಪೆಟ್ರೋಲ್ ಪಂಪ್ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕ ಹಾಗೂ ಕೇರಳ ನೋಂದಣಿಯ ಸ್ಕಾರ್ಫೀಯೋ ಕಾರಿನಲ್ಲಿ ಬಂದ ವ್ಯಕ್ತಿಗಳ ನಡುವೆ ವಾಹನ ಓವರ್ ಟೇಕ್ ಮಾಡುವ ವಿಚಾರಕ್ಕೆ ಜಗಳ ನಡೆದು ಸ್ಕಾರ್ಫೀಯೋ ಕಾರಿನಲ್ಲಿ ಬಂದಿದ್ದ 7-8 ಜನರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಆಟೋ ಚಾಲಕ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆ ವಿಚಾರ ತಿಳಿದು ಆಸ್ಪತ್ರೆಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಡಿವೈಎಸ್ಪಿ ಡಾ ವೀರಯ್ಯ ಹಿರೇಮಠ್, ಎಸ್.ಐ ಸುಚೇತ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನಿಂದ ಮಾಹಿತಿ ಪಡೆದು ಕೊಂಡಿದ್ದಾರೆ.