


ಕಾರವಾರ: ರಾಜ್ಯದ ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿಗೆ ಅಪಘಾತವಾದರೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ನೂತನ ಯೋಜನೆಯನ್ನು ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್ ಘೋಷಿಸಿದ್ದಾರೆ.
ಕುಮಟಾದ ನೂತನ ಟ್ರಾಮಾ ಕೇರ್ ಸೆಂಟರ್ ಲೋಕಾರ್ಪಣೆಗೊಳಿಸಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಈ ಘೋಷಣೆ ಮಾಡಿದರು.
ಅಪರಿಚಿತ ವ್ಯಕ್ತಿಗೆ ಅಪಘಾತ ಆದಾಗ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೊಳಿಸುತ್ತೇವೆ. ಪ್ರಥಮ 7 ದಿನ ಎರಡೂವರೆ ಲಕ್ಷ ತನಕ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಈ ಯೋಜನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಕೊಡುವ ವಿಶ್ವಾಸವಿದೆ. ವಿದೇಶ, ದೇಶ, ರಾಜ್ಯದ ಎಲ್ಲರಿಗೂ ಈ ಯೋಜನೆ ಅನ್ವಯ ಆಗುತ್ತದೆ. ಆ್ಯಕ್ಸಿಡೆಂಡ್ ಇನ್ಷುರೆನ್ಸ್ ಸ್ಕೀಂ ಎಂಬುದಾಗಿ ಅಂದು ಹರೀಶ್ ಸಾಂತ್ವನ ಯೋಜನೆ ಜಾರಿಗೊಳಿಸಿದ್ದೆವು. ಆಮೇಲೆ ಕೇಂದ್ರದವರು ಅದನ್ನು ಕಾಪಿ ಮಾಡಿ ಪ್ರಾರಂಭ ಮಾಡಿದ್ರು. ಆದರೆ, ಎರಡೂವರೆ ಲಕ್ಷ ತನಕ ನಾವು ಇದನ್ನು ಜಾಸ್ತಿ ಮಾಡಿ ನೀಡುತ್ತೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿಗೊಳಿಸುತ್ತೇವೆ. ಒಬ್ಬ ವ್ಯಕ್ತಿ ಎಲ್ಲೇ ಇದ್ರೂ ಆತನ ಜೀವ ಉಳಿಸುವ ಕೆಲಸ ಆಗಬೇಕು. ಖಾಸಗಿಗೆ ಮಾತ್ರವಲ್ಲ ಸರ್ಕಾರಿ ಟ್ರಾಮಾ ಕೇರ್ಗೂ ಸೇರಿಸಿದ್ರು. ಆಸ್ಪತ್ರೆಗೆ ಹಣ ಕೊಡುತ್ತೇವೆ. ಅದೇ ಹಣವನ್ನು ಬಳಸಿಕೊಂಡು ಆಸ್ಪತ್ರೆಯ ನಿರ್ವಹಣೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.








