ನವದೆಹಲಿ: ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (89) ನಿನ್ನೆ ರಾತ್ರಿ ಲಕ್ನೊ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಈ ಹಿರಿಯ ಬಿಜೆಪಿ ನಾಯಕರಾದ ಇವರು ಜುಲೈ 4 ರಿಂದ ರಾಷ್ಟ್ರ ರಾಜಧಾನಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್ ಜಿಪಿಜಿಜಿಐಎಂಎಸ್) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಕಲ್ಯಾಣ್ ಸಿಂಗ್ ನಿಧನಕ್ಕೆ ಪಿಎಂ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸೇರಿದಂತೆ ಹಲವು ನಾಯಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ್ ಸಿಂಗ್ ಅವರು ಹಲವು ತಿಂಗಳುಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಸ್ಜಿಪಿಜಿಐ) ಕಳೆದ 51 ದಿನಗಳ ಹಿಂದೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ 1992ರ ಬಾಬರಿ ಮಸೀದಿ ಧ್ವಂಸ ಸಂದರ್ಭ ರಾಮಮಂದಿರಕ್ಕಾಗಿ ಅಧಿಕಾರ ಕಳಕೊಂಡಿದ್ದರು.
ನಂತರ ಒಮ್ಮೆ ಬಿಜೆಪಿ ತೊರೆದ ಇವರು ಮತ್ತೇ ಪಕ್ಷಕ್ಕೆ ಸೇರಿದ್ದರು. ನಂತರ ಕಲ್ಯಾಣ್ ಸಿಂಗ್ ರಾಜಸ್ಥಾನದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.