ಕಾಲೇಜಿಗೆ ಹೋಗಿದ್ದ ಹುಡುಗಿ ಕಾಲೇಜು ಮುಗಿದ ನಂತರ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತಿದ್ದ ವೇಳೆ ಹಿಂಬದಿಯಿಂದ ಬಂದು ಟಾಟಾಏಸ್ ಗುದ್ದಿದ ಪರಿಣಾಮ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೃತಪಟ್ಟ ಯುವತಿ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದ ಕಾವೇರಿ ಕಾಜಗಾರ (21) ಎಂದು ಗುರುತಿಸಲಾಗಿದೆ.
ಕಿತ್ತೂರು ಹೊರವಲಯದ ದೇಗಾಂವ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾವೇರಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದ ಯುವತಿ ತರಗತಿ ಮುಗಿಸಿ ಕಿತ್ತೂರು ಕಡೆಗೆ ಕಾಲ್ನಡಿಗೆಯಲ್ಲಿ ಬರುವಾಗ, ಹಿಂಬದಿಯಿಂದ ಬಂದ ಟಾಟಾಏಸ್ ವಾಹನ ವಾಹನ ಡಿಕ್ಕಿ ಹೊಡೆದಿದೆ. ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಘಟನೆ ನಡೆದಿದೆ. ತಕ್ಷಣವೇ ಆಕೆಯನ್ನು ಸ್ಥಳೀಯರು ರಕ್ಷಣೆ ಮಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ವಿದ್ಯಾರ್ಥಿನಿ ಕಾವೇರಿ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ದೇಗಾಂವ ಗ್ರಾಮದ ಅನಿಲ್ ಚಿವಟಗುಂಡಿ ಎಂಬಾತನಿಂದ ಕೃತ್ಯ ನಡೆದಿದೆ. ಕಾಲೇಜು ಮುಗಿಸಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಯುವತಿಗೆ ವೇಗವಾಗಿ ಬಂದು ಗುದ್ದಿದ್ದಾನೆ. ರಸ್ತೆ ಪಕ್ಕದಲ್ಲಿ ಎತ್ತರದ ಮಣ್ಣಿನ ಗುಡ್ಡವಿದ್ದ ಕಾರಣ ಟಾಟಾ ಏಸ್ ತನ್ನತ್ತ ಬರುತ್ತಿದ್ದರೂ ಪಕ್ಕಕ್ಕೆ ಹೋಗಲು ಅವಕಾಶವಿಲ್ಲದ ಕಾರಣ ವಾಹನಕ್ಕೆ ಸಿಲುಕಿ ಕಾಲೇಜು ಯುವತಿ ಸಾವನ್ನಪ್ಪಿದ್ದಾಳೆ. ಇನ್ನು ಆಸ್ಪತ್ರೆಯಲ್ಲಿ ಮೃತದೇಹವಿದ್ದು, ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.