ನವದೆಹಲಿ : ಭಯೋತ್ಪಾದನೆ ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ಸಹಾಯ ಮಾಡುವ ದೇಶಗಳನ್ನು ತಪ್ಪಿತಸ್ಥರೆಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಹೇಳಿದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ವರ್ಚುಯಲ್ ಮೂಲಕ ಭಾಷಣ ಮಾಡಿದ ಪ್ರಧಾನಿ ಭಯೋತ್ಪಾದನೆಯೆಂಬ ಸಮಸ್ಯೆಯನ್ನು ಸಂಘಟಿತವಾಗಿ ನಿಭಾಯಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಯೋಜಿಸಿದ್ದ 12ನೇ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್,ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಭಾಗಿಯಾಗಿದ್ದರು.
ಇದೇ ವೇಳೆ ಮೋದಿ ತಮ್ಮ ಸರ್ಕಾರದ ಆತ್ಮ ನಿರ್ಭರ್ ಭಾರತ್ ಅಭಿಯಾನವು ಸಮಗ್ರ ಸುಧಾರಣಾ ಪ್ರಕ್ರಿಯೆ ಹುಟ್ಟುಹಾಕಲಿದೆ ಎಂದು ಸರ್ಕಾರ ತೆಗೆದುಕೊಂಡಿರುವ ಸುಧಾರಣಾ ಕ್ರಮಗಳನ್ನು ತಿಳಿಸಿದರು.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ಅಂತರರಾಷ್ಟ್ರೀಯ ವೇದಿಕೆ ಬ್ರಿಕ್ಸ್ ಆಗಿದ್ದು, ಪ್ರತಿವರ್ಷ ಈ ವೇದಿಕೆ ಮೂಲಕ ಐದು ರಾಷ್ಟ್ರಗಳು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚಿಸುತ್ತವೆ. ಜುಲೈನಲ್ಲಿ ನಡೆಯಬೇಕಿದ್ದ ಈ ಶೃಂಗಸಭೆ ಕೋವಿಡ್ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಇನ್ನು 2021ನೇ ಬ್ರಿಕ್ಸ್ ಸಭೆಯ ಅತಿಥ್ಯವನ್ನು ಭಾರತ ನಿರ್ವಹಿಸಲಿದ್ದು, ಈ ಕುರಿತು ಮಾತನಾಡಿದ ಪ್ರಧಾನಿ, ಬ್ರಿಕ್ಸ್ನ ಮೂರು ಸ್ತಂಭಗಳಲ್ಲಿ ಸಹಕಾರವನ್ನು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.