ವಿಜಯವಾಡ: ನಿರ್ಭಯಾದಂತಹ ಕಾನೂನುಗಳು ಹಾಗೂ ಅತ್ಯಾಚಾರಿಗಳ ಮೇಲಿನ ಎನ್ಕೌಂಟರ್ನಂತಹ ಪ್ರಕರಣಗಳು ನಡೆಯುತ್ತಿದ್ದರೂ ಕಾಮುಕರಿಗೆ ಇನ್ನು ಭಯ ಬಂದಿಲ್ಲ ಅನಿಸುತ್ತಿದೆ. ಏಕೆಂದರೆ, ನಿರ್ಭಯಾ ಮಾದರಿಯಲ್ಲಿಯೇ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಲಗುಪ್ತಮ್ ವಲಯದ 21 ವರ್ಷದ ಯುವತಿ 15 ದಿನಗಳ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದಳು. ಈ ನಡುವೆ ಆಕೆ ತನ್ನ ಸ್ನೇಹಿತನ ಜತೆಯಲ್ಲಿ ಕೊಮರಗಿರಿಪಟ್ಟಣಂನ ಕರಾವಳಿ ತೀರ ಪ್ರದೇಶಕ್ಕೆ ತೆರಳಿದ್ದು, ಯುವತಿಯ ಮೇಲೆ ಮೂವರು ಪಾನಮತ್ತ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ.
ಇದೇ ವೇಳೆ ಸೀತಾರಾಮಪುರದ ಇಬ್ಬರು ಯುವಕರು ಮತ್ತು ಸತ್ಯನಾರಾಯಣಪುರದ ಓರ್ವ ವ್ಯಕ್ತಿ ಪಾನಮತ್ತ ಸ್ಥಿತಿಯಲ್ಲಿ ಯುವತಿಯ ಎದುರಾಗಿದ್ದು, ಬಳಿಕ ಸ್ನೇಹಿತನನ್ನು ಕಟ್ಟಿಹಾಕಿ ಮೂವರು ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ, ಅಶ್ಲೀಲ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡಿದ್ದು, ಘಟನೆ ನಡೆದ ಹತ್ತು ದಿನಗಳ ಬಳಿಕ ಮೂವರಲ್ಲಿ ಒಬ್ಬ ಮತ್ತೆ ಆಕೆಯ ಮುಂದೆ ಎದುರಾಗಿ ಮತ್ತೊಮ್ಮೆ ತನ್ನ ಆಸೆ ತೀರಿಸುವಂತೆ ಕೇಳಿದ್ದಾನೆ. ಇಲ್ಲದಿದ್ದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಬೆದರಿಸಿದ್ದಾನೆ.
ಇದಾದ ಬಳಿಕ ಯುವತಿ ನಡೆದ ಘಟನೆಯನ್ನು ಮನೆಯವರ ಮುಂದೆ ವಿವರಿಸಿದ್ದು, ಇದರ ಬೆನ್ನಲ್ಲೇ ಬುಧವಾರ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಜನರಲ್ಲಿ ಆತಂಕವೂ ಶುರುವಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಜನರು ಆಗ್ರಹಿಸಿದ್ದಾರೆ.