ವಿಟ್ಲ: “ಬದುಕೆಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ., ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ”. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕುವ ಹಾದಿ ಸುಲಲಿತವೇನಲ್ಲ. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಈ ಮದ್ಯೆ ಎಲ್ಲರ ನೋವು ನಲಿವುಗಳಿಗೆ ಅನುಕಂಪಸಹಿತ ಪರೋಪಕಾರಿಗಳಾಗಿ ಬದುಕುವ ಮನಸ್ಸು ನಿಜವಾಗಿಯೂ ಜೇಷ್ಠ. ಕಷ್ಟ ಎಲ್ಲರಿಗೂ ಇದೆ ಈ ನಡುವೆ ದುಡಿಮೆಯ ಒಂದಂಶ ನಮಗಿಂತಲೂ ಸಂಕಷ್ಟದಲ್ಲಿರುವವರಿಗೆ ಸಲ್ಲಲಿ ಎಂಬ ಉದಾತ್ತ ಮನಸಿನಿಂದ ನೀಡಿದ ನಮ್ಮ ದಾನ ಭಗವಂತನಿಗೂ ಪ್ರೀತ್ಯರ್ಥವೆಂದೇ ನಂಬಿದರೆ ಅದಕ್ಕೆ ಚ್ಯುತಿ ಇಲ್ಲ.
ಅಳಿಕೆ ಗ್ರಾಮದ ಎರುಂಬು ದಿವಂಗತ ಬಾಬು ರವರ ಅಕಾಲಿಕ ಮರಣ, ಅವರ ಸುಪುತ್ರಿಯ ಅಸೌಖ್ಯತೆ, ಅವರ ಮನೆಯ ಸ್ಥಿತಿಗತಿಯ ಮೇಲೆ, ಅನುಕಂಪ ತೋರಿ ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರವೃಂದ ಇದರ ಸರ್ವ ಸದಸ್ಯರು ಸೇರಿ ಸಂಗ್ರಹಿಸಿದ ರೂಪಾಯಿ 31,501/- ನ್ನು ಮೃತರ ಪತ್ನಿ ಕಮಲ ರವರ ಕೈಯಲ್ಲಿ ದಿನಾಂಕ 09.07.2023ರಂದು ನೀಡಲಾಯಿತು. ಈ ಸಂಗ್ರಹ ಮಿತ್ರ ವೃಂದದ ಸರ್ವರ ಸ್ವಯಂಪ್ರೇರಿತ ದೇಣಿಗೆಯಾಗಿ ಆ ಮನೆಯವರ ಸಂಕಷ್ಟಕ್ಕೆ ನೇರವಾಗಲಿದೆ.
ಸರ್ವ ಸದಸ್ಯರು ಜತೆ ಸೇರಿ ಮೃತರ ಮನೆಗೆ ಭೇಟಿಯಿತ್ತು ಪತ್ನಿ ಮಕ್ಕಳನ್ನು ಸಂತೈಸಿ ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಸದ್ಗತಿ ಕೋರಿದರು. ಸಹಾಯ ಹಸ್ತ ಚಾಚಿದ ಶ್ರೀ ದಿವ್ಯಜ್ಯೋತಿ ಮಿತ್ರ ವೃಂದದ ಸರ್ವ ಸದಸ್ಯರಿಗೂ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.