


ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿರುವ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ವಿಟ್ಲ ಸಾಲೆತ್ತೂರು ನಿವಾಸಿ ಜಗನ್ನಾಥ್ ರವರು ಕೆಲಸದ ನಿಮಿತ್ತ ವಿದೇಶದಲ್ಲಿದ್ದು ಮನೆಯಲ್ಲಿ ಅವರ ಪತ್ನಿ ವಿಜಯ ಜಗನ್ನಾಥ್ ಹಾಗೂ ಇಬ್ಬರು ಮಕ್ಕಳು ವಾಸ ಮಾಡುತ್ತಿದ್ದರು. ಆ.3ರಂದು ವಿಜಯ ತನ್ನ ಮಕ್ಕಳೊಂದಿಗೆ ಈಶ್ವರಮಂಗಲ ಪಂಚೋಡಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದು ಆ.4ರಂದು ವಾಪಾಸು ಹಿಂದಿರುಗಿ ಮನೆಗೆ ಬರುವ ಈ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯೊಳಗೆ ನುಗ್ಗಿದ ಕಳ್ಳರು ಮನೆಯ ಎದುರು ಬಾಗಿಲನ್ನು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿರುವುದು ಕಂಡುಬಂದಿದೆ. ಮನೆಯ ಒಳಗೆ ಬೆಡ್ರೂಮಿನಲ್ಲಿದ್ದ ಕಬ್ಬಿಣದ ಗೋದ್ರೇಜನ್ನು ತೆರೆದು ಅದರ ಲಾಕರನ್ನು ಕಳ್ಳರು ಯಾವುದೋ ಸಾಧನದಿಂದ ಮುರಿದು, ಅದರಲ್ಲಿದ್ದ ಒಟ್ಟು 34 ಗ್ರಾಂ ನಷ್ಟು ಚಿನ್ನ ಹಾಗು 6000/-ರೂ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ವಿದೇಶದ ನೋಟುಗಳು ಹಾಗೂ ನಾಣ್ಯಗಳಿದ್ದ ಡಬ್ಬವನ್ನು ಕದ್ದೊಯ್ದಿದ್ದಾರೆ. ವಿಜಯ ಅವರ ಪುತ್ರಿಯ ಶಾಲಾ ಬ್ಯಾಗ್ನಲ್ಲಿದ್ದ ಪುಸ್ತಕವನ್ನು ಎಸೆದು ಬ್ಯಾಗನ್ನು ಕೊಂಡೊಯ್ದಿದ್ದಾರೆ. ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯ 1,42,000/- ರೂ ಆಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮನೆಯನ್ನು ಕಾವಲು ಕಾಯುತ್ತಿದ್ದ ಎರಡು ಶ್ಯಾನಗಳಲ್ಲಿ ಒಂದು ಶ್ವಾನ ಕಾಣೆಯಾಗಿದೆ. ಕಳ್ಳರು ನಾಯಿಯನ್ನೂ ಕೊಂದಿರಬಹುದು ಎಂದು ಶಂಕಿಸಲಾಗಿದೆ.