ವಿಟ್ಲ: ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬೆಳಗ್ಗೆ 9 ಗಂಟೆಗೆ ಬರಬೇಕಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಧ್ಯಾಹ್ನವಾದರೂ ಬರದೇ ಇದ್ದ ಕಾರಣ ಜಿ.ಪಂ.ಸದಸ್ಯರು ಮತ್ತು ತಾ.ಪಂ.ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಯುವಂತಾಗಿದೆ.
ಈ ಬಾರಿಯ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ಜಿಲ್ಲೆಯ ವಿಟ್ಲಪಡ್ನೂರು ಗ್ರಾಮದಲ್ಲಿ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರ ಗ್ರಾಮವಾಸ್ತವ್ಯವನ್ನು ಇಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ನಿಗದಿಪಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಆಗಮಿಸುವಾಗ 11 ಗಂಟೆಯಾಗುತ್ತದೆ ಎಂದು ಶುಕ್ರವಾರ ತಿಳಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಆಗಮಿಸುವಾಗ 11.30 ಆಗಲಿದೆ ಎಂದು ಶನಿವಾರ ಬೆಳಗ್ಗೆ ಹೇಳಲಾಗಿತ್ತು. ಆದರೆ ಗಂಟೆ 12.30 ಆದರೂ ಜಿಲ್ಲಾಧಿಕಾರಿ ಆಗಮಿಸಲಿಲ್ಲ.
ಹೆಚ್ಚಿನ ಇಲಾಖಾಧಿಕಾರಿಗಳು ಬಂದಿದ್ದು, ಫಲಾನುಭವಿಗಳು, ಗ್ರಾಮಸ್ಥರು ಕಾದು ಕಾದು ಸುಸ್ತಾಗಿದ್ದಾರೆ. ಜಿ.ಪಂ.ಸದಸ್ಯರು ಮತ್ತು ತಾ.ಪಂ.ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಕಾಯುತ್ತಿದ್ದಾರೆ.