ವಿಟ್ಲ: 4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ ಕೊನೆಗೆ ಒಂದೇ ದಿನದಲ್ಲಿ ಅಂತ್ಯ ಕಂಡಿದೆ. ಫೇಸ್ಬುಕ್ನಲ್ಲಿ ಪರಿಚಯವಾದ ಯುವಕನ ಮೋಡಿಗೆ ಬಿದ್ದ ಬಂಟ್ವಾಳ ತಾಲೂಕಿನ ಹುಡುಗಿಯೊಬ್ಬಳು ಅದರಿಂದ ಹೊರಬರದೆ ಆತನ ಅಮಲಿನಲ್ಲಿ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು. ಈಗ ಈ ಲವ್ ಸ್ಟೋರಿ ಮುರಿದುಬಿದ್ದಿದೆ. ಹೆಣ್ಣಿನ ಬಾಳಿನಲ್ಲಿ ಆಟವಾಡಿದ್ದು ಮಾತ್ರ ಒಬ್ಬಳು ಮಂಗಳಮುಖಿ..!
ಫೇಸ್ಬುಕ್ನಲ್ಲಿ ಪರಿಚಯ…! ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ನ್ಯಾಯವಾದಿ ಶೈಲಜಾ ರಾಜೇಶ್..!
ಫೇಸ್ಬುಕ್ ಮೂಲಕ ಪರಿಚಯವಾದ ಯುವಕನ ಜೊತೆ ಯುವತಿ ಮಾತನಾಡುತ್ತಿದ್ದಳು. ಬರೋಬ್ಬರಿ 4 ವರ್ಷಗಳಿಂದ ಚಾಟಿಂಗ್ ನಡೆಯುತ್ತಿದ್ದು ದಿನಾಲೂ ಮನೆಯಲ್ಲಿ ಹುಡುಗಿ ಮತ್ತು ಮನೆಯವರು ಆತನ ವಿಷಯದಿಂದ ಜಗಳ ಮಾಡಿಕೊಳ್ಳುತ್ತಿದ್ದರು. ಹುಡುಗಿಯ ಅಮ್ಮ ಇದರಿಂದ ನೊಂದು ನ್ಯಾಯವಾದಿ ಶೈಲಜಾ ರಾಜೇಶ್ ಅವರ ಬಳಿ ಪ್ರಕರಣ ದಾಖಲಿಸಿರುತ್ತಾರೆ. ಪ್ರಕರಣವನ್ನು ಭೇದಿಸಲು ವಿಟ್ಲ ಪೊಲೀಸ್ ಅಧಿಕಾರಿ ಗಳಲ್ಲಿ ದೂರು ದಾಖಲಿಸಿ, ವಕೀಲೆ ತಾನೇ ಖುದ್ದಾಗಿ ಪ್ರಕರಣ ದ ಜಾಡು ಹಿಡಿಯಲು ಹೊರಟು ಪ್ರೇಮ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.
ಪ್ರಕರಣದ ಜಾಡು ಹಿಡಿಯಲು ವಿಟ್ಲ ಪೊಲೀಸ್ ಮತ್ತು ಶಂಕರನಾರಾಯಣ ಠಾಣೆಯ ಪೊಲೀಸ್ ತಕ್ಷಣವೇ ಸ್ಪಂದಿಸಿದ್ದಾರೆ. ಕರೆಯನ್ನು ಮಾಡುತ್ತಿದ್ದ ಸ್ಥಳವನ್ನು ಪತ್ತೆಹಚ್ಚಿ ಅಲ್ಲಿಗೆ ಪೊಲೀಸರ ಸಮೇತ ಭೇಟಿಕೊಟ್ಟಾಗ ಆ ಹುಡುಗಿಯೊಂದಿಗೆ ಮಾತನಾಡುತ್ತಿದ್ದದ್ದು ಮಂಗಳಮುಖಿ ಎಂದು ತಿಳಿದುಬಂದಿದೆ. ಜ್ಯೋತಿ ಎಂಬಾಕೆ ಪ್ರದೀಪ ಎಂಬ ಹೆಸರಿನಲ್ಲಿ ಸಿವಿಲ್ ಇಂಜಿನಿಯರ್ ಎಂದು ನಂಬಿಸಿ ಗಂಡು ಧ್ವನಿಯಲ್ಲಿ ಮಾತನಾಡಿದ್ದಳು ಎನ್ನುವುದು ಬೆಳಕಿಗೆ ಬಂದಿದೆ.
ಒಂದು ಮುಗ್ಧ ಹೆಣ್ಣಿನ ಜೀವ, ಜೀವನವನ್ನು ಉಳಿಸಲು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶೈಲಜಾ ರಾಜೇಶ್ ಯಶಸ್ವಿಯಾಗಿದ್ದಾರೆ. ಇವರೊಂದಿಗೆ ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ಹೆಚ್ ಇ ನಾಗರಾಜ್, ಸಂದೀಪ್ ಮತ್ತು ಶಂಕರನಾರಾಯಣ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹಕರಿಸಿದ್ದಾರೆ.
ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇದ್ದೆ ಇರುತ್ತಾರೆ. ದಯವಿಟ್ಟು ಯಾರೇ ಗುರುತು, ಮುಖಪರಿಚಯ ಇಲ್ಲದವರ ಜೊತೆ ಸ್ನೇಹ ಬೆಳೆಸಿಕೊಂಡರೆ ನಿಮ್ಮ ಈ ಪರಿಸ್ಥಿತಿ ಬರಬಹುದು ಯುವತಿಯರೇ ಎಚ್ಚರ..