ವಿಟ್ಲ: ಆಕಸ್ಮಿಕವಾಗಿ ಅರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಮರಗಳು ಬೆಂಕಿಗಾಹುತಿಯಾದ ಘಟನೆ ವಿಟ್ಲ ಕನ್ಯಾನ ರಸ್ತೆಯ ಕಾನತ್ತಡ್ಕದಲ್ಲಿ ನಡೆದಿದೆ.
ಕನ್ಯಾನ ರಸ್ತೆಯ ರಕ್ಷಿತಾರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಸ್ಥಳೀಯರು ಅಗ್ನಿಶಾಮಕದಳ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಕಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಬಂಟ್ವಾಳ ಅಗ್ಮಿಶಾಮಕದ ದಳದ ಅಧಿಕಾರಿ ಯೋಗೀಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ವಿಟ್ಲ ಸುತ್ತಮುತ್ತಲಿನಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಪುತ್ತೂರು ಅಥವಾ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಅವರು ವಿಟ್ಲಕ್ಕೆ ಬರುವಷ್ಟರಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿ ಸಾಕಷ್ಟು ಹಾನಿ ಸಂಭವಿಸಿರುತ್ತದೆ.
ವಿಟ್ಲದಲ್ಲಿ ಪ್ರತ್ಯೇಕ ಅಗ್ನಿಶಾಮಕದಳ ಕೇಂದ್ರ ಸ್ಥಾಪಿಸಬೇಕೆಂದು ಹಲವಾರು ಭಾರೀ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.