ವಿಟ್ಲ: ಸಂಸ್ಥೆಯಲ್ಲಿ ಸೇವಾ ನಿಯೋಜನೆಗೊಂಡಾಗ ಹುದ್ದೆ ಮುಖ್ಯವಾಗದೆ ಜವಾಬ್ದಾರಿ ಹೆಚ್ಚಾಗಬೇಕು. ಅಲ್ಲಿ ಶ್ರದ್ದೆ, ಹೊಂದಾಣಿಕೆ ಇದ್ದು ಸಂಸ್ಥೆಗೆ ಪುಷ್ಟಿದಾಯಕವಾಗಿ ಕೆಲಸ ನಿರ್ವಹಿಸಬೇಕು ಎಂದು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶಾಲಿನಿ ನೋಂಡ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
ದಿನಾಂಕ 20.12.2020ರಂದು ಶಾಲೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಯಲ್.ಯನ್. ಕೂಡೂರು ಅವರು ಸ್ವಯಂಪ್ರೇರಿತ, ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆ ಸ್ವ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹೊಸತನವನ್ನು ಊರ್ಜಿತಗೊಳಿಸಲು ಸದಾ ಮನಸ್ಕರಾಗಿರುವ ಮಾದರಿ ಶಿಕ್ಷಕರ ಸಾಲಿನಲ್ಲಿ ಶಾಲಿನಿ ನೋಂಡಾ ಸೇರುತ್ತಾರೆಂದು ಪ್ರಶಂಸಿದರು.
ಆಡಳಿತ ಮಂಡಳಿಯಿಂದ ಹಾಗೂ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಲಾಯಿತು. ಶಾಲಾ ಆಡಳಿತಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜಯರಾಮ್ ರೈ, ಆಡಳಿತಾಧಿಕಾರಿ ರಾಧಾಕೃಷ್ಣ. ಎ, ಉಪಪ್ರಾಂಶುಪಾಲರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ ಮತ್ತು ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು . ಸಹಶಿಕ್ಷಕಿ ಧನಲಕ್ಷ್ಮಿ ಪ್ರಾರ್ಥಿಸಿದರು. ನಯನ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಶೇಕ್ ಝುಕಿಯಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.