

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೊಬ್ಬೆಕೇರಿ ಯಮಹಾ ಶೋರೂಂ ಎದುರುಗಡೆ ರಸ್ತೆಯ ಮೇಲೆ ಚರಂಡಿ ನೀರು ಹರಿದು, ರಸ್ತೆಯ ಮಧ್ಯಭಾಗದಲ್ಲಿ ಮೃತ್ಯುಕೂಪವೊಂದು ಬಾಯ್ತೆರೆದು ನಿಂತಿದೆ. ಕಳೆದ ಎರಡು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದ್ದು, ಮಳೆ ನೀರು ಹಾದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆಯ ಮೇಲೆ ಹರಿಯತ್ತಿದೆ. ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆಯೂ ಈ ಬಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪಟ್ಟಣ ಪಂಚಾಯತ್ಗೆ ಮನವಿ ಮಾಡಲಾಗಿತ್ತು.


ಆದರೆ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಯಾವುದೇ ಪರ್ಯಾಯ ಕ್ರಮಗಳನ್ನು ಕೈಗೊಂಡಿಲ್ಲ. ಇದೀಗ ಚರಂಡಿ ನೀರು ರಸ್ತೆ ಮೇಲೆ ಹರಿದು ರಸ್ತೆಯ ಮಧ್ಯಭಾಗದಲ್ಲಿ ಹೊಂಡವೊಂದು ನಿರ್ಮಾಣವಾಗಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಾಚಾರಿಗಳು ಈ ರಸ್ತೆಯಲ್ಲಿ ಸಂಚರಿಸಲು ಭಯಭೀತರಾಗಿದ್ದಾರೆ. ವಿಟ್ಲ ಮಂಗಳೂರು ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನ ಸವಾರರು ಸಂಚರಿಸುತ್ತಿದ್ದು, ರಸ್ತೆ ಮಧ್ಯದಲ್ಲಿ ಬಾಯ್ತೆರೆದು ನಿಂತ ಹೊಂಡ ದ್ವಿಚಕ್ರ ವಾಹನ ಸವಾರರ ಹಾಗೂ ಪಾದಾಚಾರಿಗಳ ಪಾಲಿಗೆ ಮೃತ್ಯಕೂಪವಾಗಿದೆ. ಈ ರಸ್ತೆಯಲ್ಲಿ ವಾಹನ ಸವಾರರು ಇಷ್ಟೆಲ್ಲ ಪರದಾಡಿದ್ರೂ ಇಂತಹ ಭೀಕರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿ, ಇಲಾಖೆಗಳು ಕಣ್ಣಿದ್ದು ಕುರುಡರಂತೆ ವರ್ತಿಸಿರೋದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಈ ಸಮಸ್ಯೆಗಳ ಬಗ್ಗೆ ಯಾರೂ ಕೇಳೋರಿಲ್ವಾ? ಇಂತಹ ಸಮಸ್ಯೆಗಳಿಗೆ ಪರ್ಯಾಯ ವ್ಯವಸ್ಥೆಯಾದ್ರೂ ಏನು ಇಲ್ವಾ? ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಪರದಾಟಕ್ಕೆ ಕೊನೆ ಇಲ್ವಾ? ಈ ಭೀಕರ ಸಮಸ್ಯೆ ಹೀಗಿಯೇ ಮುಂದುವರೆದರೆ ಮುಂದೊಂದು ದಿನ ಸಾವು ಖಂಡಿತ. ಬಾಯ್ತೆರೆದು ನಿಂತ ಮೃತ್ಯುಕೂಪವನ್ನು ತಕ್ಷಣ ಸರಿಪಡಿಸುವಂತೆ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
