ವಿಟ್ಲ: ದಿನಾಂಕ 22/12/ 2020 ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಟ್ಲ ಮುಡ್ನೂರು ಗ್ರಾಮದ 9ನೇ ವಾರ್ಡ್ ನಿಂದ ಚುನಾಯಿತರಾದ ಉಮೇಶ್ ಅರ್ಕಲ್ ತೋಟ, ಶ್ರೀಮತಿ ರೋಹಿಣಿ ರಾಜೇಶ್ ಪೂಜಾರಿ, ಶ್ರೀಮತಿ ಚಂದ್ರಾವತಿ ಸಂಜೀವ ನಾಯ್ಕ್ ಇವರನ್ನು ಅಭಿನಂದಿಸುವ ಕಾರ್ಯಕ್ರಮ ಮರುವಾಳ ಮನೆಯಲ್ಲಿ ನಡೆಯಿತು.
ಜಯಕರ ಶೆಟ್ಟಿ ಮರುವಾಳ, ವೇಣುಗೋಪಾಲ ಶೆಟ್ಟಿ ಮರುವಾಳ, ಲೋಕನಾಥ ಶೆಟ್ಟಿ ಮರುವಾಳ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಗೋವಿಂದರಾಜ್ ವಕೀಲರು ತಂತ್ರಜ್ಞಾನದ ಮೂಲಕ ಗ್ರಾಮಭಿವೃದ್ಧಿಗೆ ಅನುದಾನ ಪಡೆಯುವ ಮಾಹಿತಿಯನ್ನು ನೀಡಿದರು. ಶಿಕ್ಷಕರಾದ ನಾರಾಯಣ ಪೂಜಾರಿಯವರು ವಿವಿಧ ಮೂಲಗಳಿಂದ ಅನುದಾನವನ್ನು ಪಡೆದು ಅಭಿವೃದ್ಧಿ ಕಾರ್ಯವನ್ನು ಮಾಡುವ ಬಗ್ಗೆ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು. ಅಬುಬೂಕ್ಕರ್ ರವರು ತಮ್ಮ ವಾರ್ಡಿಗೆ ಸಿಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರು. ಅಭಿನಂದನೆ ಸ್ವೀಕರಿಸಿದ ಚುನಾಯಿತ ಪ್ರತಿನಿಧಿಗಳು ಮತದಾರರಿಗೆ ಕೃತಜ್ಞತೆಯೊಂದಿಗೆ ತಾರತಮ್ಯವಿಲ್ಲದೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ವೇಣುಗೋಪಾಲ ಶೆಟ್ಟಿಯವರು ಪ್ರಾಸ್ತವಿಕವಾಗಿ ಮಾತನಾಡಿದರು. ಲೋಕನಾಥ ಶೆಟ್ಟಿ ಸ್ವಾಗತಿಸಿ, ಜಯಕರ ಶೆಟ್ಟಿಯವರು ವಂದನಾರ್ಪಣೆಗೈದರು.