ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊರೊನ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಮ್ಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಕೊರೊನ ತಪಾಸಣೆ ಮಾಡುವುದು ಅಗತ್ಯವಿದೆ ಎಂದು ಸದಸ್ಯ ಅಶೋಕ್ ಕುಮಾರ್ ಶೆಟ್ಟಿರವರು ಹೇಳಿದರು. ಈ ವೇಳೆ ಅರುಣ್ ವಿಟ್ಲ ರವರು ಮಾತನಾಡಿ ಪ್ರತಿ ವಾರ್ಡ್ ಗಳಲ್ಲಿ ಮಾಡಿದಲ್ಲಿ ಎಲ್ಲರಿಗೂ ಕೊರೊನ ಪಾಸಿಟಿವ್ ಬರುವ ಸಾಧ್ಯತೆ ಇದೆ. ಯಾಕೆಂದರೆ ಪ್ರತಿಯೊಂದು ಮನೆಯಲ್ಲಿಯೂ ಶೀತ ನೆಗಡಿ ಇದ್ದೇ ಇರುತ್ತದೆ. ಹೀಗಿರುವಾಗ ತಪಾಸಣೆ ಮಾಡಿದಲ್ಲಿ ಪ್ರತಿಯೊಂದೂ ಮನೆಯಲ್ಲಿಯೂ ಪಾಸಿಟೀವ್ ಬರುವ ಸಾಧ್ಯತೆ ಇದ್ದು, ಇದರಿಂದಾಗಿ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯೇ ಸೀಲ್ಡೌನ್ ಆಗುವ ಸಾಧ್ಯತೆ ಇದೆ ಎಂದರು. ಇದಕ್ಕೆ ಸದಸ್ಯರಾದ ರವಿ ಪ್ರಕಾಶ್ ಧ್ವನಿಗೂಡಿಸಿ ಪ್ರತಿಯೊಬ್ಬರನ್ನೂ ಬಲವಂತವಾಗಿ ರ್ಯಾಪಿಡ್ ಟೆಸ್ಟ್ ಮಾಡುವ ಅಗತ್ಯವಿಲ್ಲ.
ರೋಗ ಲಕ್ಷಣ ಕಂಡುಬಂದಲ್ಲಿ ಅಂತವರು ಸ್ವ ಇಚ್ಚೆಯಿಂದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಲಿ. ಈ ಬಗ್ಗೆ ಪಟ್ಟಣ ಪಂಚಾಯತ್ ನಿಂದ ನೋಟಿಸ್ ಕಳುಹಿಸುವ ಕೆಲಸವಾಗಲಿ. ಇದೀಗ ಸರಕಾರಿ ಆಸ್ಪತ್ರೆಗಳಲ್ಲಿ ಟೆಸ್ಟ್ ನಡೆಸುವ ಕಿಟ್ ಗಳ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಗಳಿಗೆ ಪರೀಕ್ಷೆ ನಡೆಸುವ ಕಿಟ್ಗಳನ್ನು ಹೆಚ್ಚುವರಿಯಾಗಿ ಕಳುಹಿಸುವ ಕೆಲಸವಾಗಬೇಕು. ನಮ್ಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಫ್ಯಾಕ್ಟರಿಯವರಲ್ಲಿ ಅಲ್ಲಿಯೇ ರ್ಯಾಪಿಡ್ ಟೆಸ್ಟ್ ನಡೆಸುವಂತೆ ಸೂಚನೆ ನೀಡಿ ಎಂದರು. ಈ ಬಗ್ಗ ಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ವಿಟ್ಲ ಪಟ್ಟಣ ಪಂಚಾಯತ್ ಸಾರ್ವಜನಿಕರಿಗೆ ಸವಲತ್ತುಗಳನ್ನು ತಲುಪಿಸುವಲ್ಲಿ ಬಹಳಷ್ಟು ಹಿಂದಿದೆ. ಯಾಕೆಂದರೆ ಮೊನ್ನೆ ಲಾಕ್ ಡೌನ್ ಸಂದರ್ಭ ದಲ್ಲಿ ಬಡವರಿಗೆ ಕಿಟ್ ಕೊಡುವಂತಹ ಕೆಲಸ ನಮ್ಮ ಪಟ್ಟಣ ಪಂಚಾಯಿತಿ ನಿಂದ ಆಗಿಲ್ಲ ಎಂದರು. ಈ ವೇಳೆ ಅರುಣ್ ವಿಟ್ಲ ಮಾತನಾಡಿ ಅವೆಲ್ಲವೂ ಅಧ್ಯಕ್ಷರ ವಿಫಲತೆ ಕಾರಣ ಎಂದು ಆರೋಪಿಸಿದರು.
ಈ ವೇಳೆ ಅಧ್ಯಕ್ಷರು ಮಾತನಾಡಿ ನಾನು ನನ್ನಿಂದ ಆಗುವ ಕೆಲಸವನ್ನು ಮಾಡಿದ್ದೇನೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಸರಕಾರದಿಂದ ಬರಬೇಕಾದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಉಪಾಧ್ಯಕ್ಷ ಜಯಂತ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಸದಸ್ಯರಾದ ಅರುಣ್ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಕೃಷ್ಣ, ರಾಮ್ ದಾಸ್ ಶೆಣೈ, ಸುನಿತಾ ಕೋಟ್ಯಾನ್, ಲತಾಅಶೋಕ್ ಕುಮಾರ್, ಇಂದಿರಾ ಅಡ್ಡಾಳಿ, ಚಂದ್ರಕಾಂತಿ ಶೆಟ್ಟಿ, ಮಂಜುನಾಥ ಕಲ್ಲಕಟ್ಟ, ಸಂದ್ಯಾ ಮೋಹನ್, ರವಿಪ್ರಕಾಶ್, ಹಸೈನಾರ್ ನೆಲ್ಲಿಗುಡ್ಡೆ, ಅಬೂಬಕ್ಕರ್ ಒಕ್ಕೆತ್ತೂರು, ಗೀತಾ ಪುರಂದರ, ಮುಖ್ಯಾಧಿಕಾರಿ ಮಾಲಿನಿ, ಎಂಜಿನಿಯರ್ ಶ್ರೀಧರ್ ಸಭೆಯಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ರತ್ನ ಹಾಗೂ ಚಂದ್ರ ಶೇಖರ ವರ್ಮರವರು ಸಹಕರಿಸಿದರು.