ವಿಟ್ಲ: ಹೊಳೆಯಿಂದ ಮರಳು ಸಂಗ್ರಹಿಸಲು ಸಿದ್ಧತೆ ನಡೆಸುತ್ತಿದ್ದ ಸ್ಥಳಕ್ಕೆ ವಿಟ್ಲ ಪ್ರಭಾರ ಎಸೈ ರಾಜೇಶ್ ಕೆ.ವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಬೋಟು ಹಾಗೂ ಯಂತ್ರವನ್ನು ವಶಪಡಿಸಿಕೊಂಡ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.
ಕೊಳ್ನಾಡು ಗ್ರಾಮದ ಕುಡ್ತಮುಗೇರು ಭಾಗದಲ್ಲಿ ಹಾದುಹೋಗುವ ಹೊಳೆಯಿಂದ ಕಳೆದ ಕೆಲವು ಸಮಯಗಳಿಂದ ಪಿಕಪ್ ಮೊದಲಾದ ವಾಹನಗಳ ಮೂಲಕ ಮರಳು ಸಂಗ್ರಹಿಸಿ, ಸಾಗಾಟ ಮಾಡುತ್ತಿದ್ದರು. ಇದೀಗ ಡ್ರಜ್ಜಿಂಗ್ ಮೆಷಿನ್ ಮೂಲಕ ಹೊಳೆಯಿಂದ ಮರಳು ಸಂಗ್ರಹಿಸಲು ಪ್ಲ್ಯಾನ್ ಮಾಡಲಾಗಿತ್ತು. ಅದರಂತೆ ಮರಳು ಸಂಗ್ರಹಿಸಲು ಬೋಟು ಮತ್ತು ಮೆಷಿನ್ ಅನ್ನು ತಂದು ಇಲ್ಲಿ ಇಡಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಯಾರಿಗೆ ಸಂಬಂಧಿಸಿದ ವಸ್ತುಗಳು ಹಾಗೂ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಕ್ರೈನ್ ಮೂಲಕ ಮರಳು ಕೊರೆಯುವ ಯಂತ್ರಗಳನ್ನು ವಿಟ್ಲ ಪೊಲೀಸ್ ಠಾಣೆಗೆ ತಂದಿದ್ದು, ಪ್ರಕರಣವನ್ನು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ದೊಡ್ಡ ಪ್ರಮಾಣದ ವಸ್ತುಗಳನ್ನು ಕಂಡು ಜನತೆ ಬೆಚ್ಚಿ ಬಿದ್ದಿದ್ದಾರೆ.