

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ವಿವಾಹದಂದು ಮುಸ್ಲಿಂ ವರನು ತುಳುನಾಡಿನ ಕಾರ್ಣೀಕ ಶಕ್ತಿ ಕೊರಗಜ್ಜನನ್ನು ಹೋಲುವ ವೇಷ ಧರಿಸಿದ್ದು ಕರಾವಳಿಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೊರಗಜ್ಜನನ್ನು ನಂಬುವ ಲಕ್ಷಾಂತರ ಮಂದಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಮುಖ ಆರೋಪಿ ಉಮ್ರುಲ್ಲಾ ಬಾಷಿತ್’ನನ್ನು ವಿಟ್ಲ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ವಿದೇಶಕ್ಕೆ ಪರಾರಿಯಾಗಲು ಯತ್ನ ನಡೆಸಿದ್ದ ಬಾಷಿತ್’ನನ್ನು ಬಂಧಿಸಿದ ವಿಟ್ಲ ಪೊಲೀಸರನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡವು ಅಭಿನಂದಿಸಿದೆ.

ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೊದಲು ದೂರು ನೀಡಿದ ಹಿಂಜಾವೇ..!
ಮದುಮಗನು ಮಾಡಿದ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡವು ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಡವನ್ನು ಹೇರಿದ್ದರು. ಹಿಂಜಾವೇ ವಿಟ್ಲ ತಾಲೂಕು ಕಾರ್ಯದರ್ಶಿ ಚೇತನ್ ಕಡಂಬು ಇವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಈ ಮೂಲಕ ವಿಟ್ಲ ಈ ಪ್ರಕರಣದ ಮೊದಲ ಎಫ್.ಐ.ಆರ್ ದಾಖಲಾಗಿತ್ತು. ಅದೇ ದಿನ ಸಂಜೆ ವಿಟ್ಲ ಖಾಸಗಿ ಬಸ್ಸು ನಿಲ್ದಾಣದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು 48 ಗಂಟೆಗಳ ಒಳಗಾಗಿ ಬಂಧಿಸುವಂತೆ ಪೊಲೀಸರಿಗೆ ಕರೆಕೊಟ್ಟಿದ್ದರು.

ನಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೂ ಪ್ರಮುಖ ಆರೋಪಿ ಉಮ್ರುಲ್ಲಾ ಬಾಷಿತ್’ನನ್ನು ಬಂಧಿಸಿರಲಿಲ್ಲ. ಈ ಹಿನ್ನಲೆ ಜನವರಿ 11 ರಂದು ಹಿಂದೂ ಜಾಗರಣ ವೇದಿಕೆ ವಿಟ್ಲ ಸ್ವಯಂ ಘೋಷಿತ ಬಂದ್’ಗೆ ಕರೆ ನೀಡಿದ್ದರು. ಇದಕ್ಕೆ ಬಹುತೇಕ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ್ದರು.

ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಪ್ರತಿಕ್ರಿಯೆ..!
ಈ ಕುರಿತಂತೆ ವಿ ಟಿವಿ ಜೊತೆಗೆ ಮಾತನಾಡಿದ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಣಿಕ ಶಕ್ತಿಯನ್ನು ಅವಮಾನ ಮಾಡುವ ಕೃತ್ಯ ಇನ್ನು ಮರುಕಳಿಸಬಾರದು. ಈ ಕೃತ್ಯದಲ್ಲಿ ತೊಡಗಿದ್ದ ಕೆಲವರ ಬಂಧನ ಇನ್ನೂ ಕೂಡ ಆಗಿಲ್ಲ. ಇವರನ್ನೂ ಬಂಧಿಸಬೇಕು. ಕಿಡಿಗೇಡಿಗಳಿಗೆ ಇದೊಂದು ಪಾಠವಾಗಬೇಕು ಎಂದು ಹೇಳಿದರು.

ಹಿಂ.ಜಾ.ವೇ ವಿಟ್ಲ ಪ್ರಖಂಡದ ಅಧ್ಯಕ್ಷ ಗಣೇಶ್ ಕೆದಿಲ, ಉಪಾಧ್ಯಕ್ಷ ರಾಜೇಶ್ ಕರೋಪಾಡಿ, ಕಾರ್ಯದರ್ಶಿ ಹರ್ಷ ರೈ, ವಿಟ್ಲ ತಾಲೂಕು ಕಾರ್ಯದರ್ಶಿ ಚೇತನ್ ಕಡಂಬು ಸೇರಿದಂತೆ ಪ್ರಮುಖರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.










