ವಿಟ್ಲ: ಕಳೆದ ಹಲವು ಸಮಯಗಳಿಂದ ನೆರೆ ರಾಜ್ಯ ಕೇರಳದಿಂದ ಆಂಧ್ರ ಪ್ರದೇಶಕ್ಕೆ ಬೃಹತ್ ಲಾರಿಗಳಲ್ಲಿ ಬಾಕ್ಸೈಟ್ ಸಾಗಿಸುತ್ತಿದ್ದು ಜನರನ್ನು ನಿದ್ದೆಗಡೆಸುವಂತಾಗಿದೆ. ಈ ಲಾರಿ ಚಾಲಕರ ಅತಿ ವೇಗ, ನಿರ್ಲಕ್ಷ್ಯದ ಚಾಲನೆಯಿಂದ ಜನರು ಹೈರಾಣ ಆಗಿದ್ದಾರೆ. ಬಾಕ್ಸೈಟ್ ಲಾರಿ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ವಿಟ್ಲದ ಬೈರಿಕಟ್ಟೆಯಲ್ಲಿ ನಡೆದಿದೆ.
ಆಟೋ ರಿಕ್ಷಾ ಮತ್ತು ಮಣ್ಣು ಕೊಂಡೊಯ್ಯುತ್ತಿದ್ದ ಬಾಕ್ಸೈಟ್ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ರಿಕ್ಷಾದ ಒಂದು ಭಾಗ ಜಖಂಗೊಂಡಿದೆ. ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಕ್ಕುಡ- ಕನ್ಯಾನ ರಸ್ತೆಯಲ್ಲಿ 16 ಘನ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲದಿದ್ದರು ಮಣ್ಣು ಸಾಗಾಟದ ದಂಧೆ ಹೆಚ್ಚಾಗುತ್ತಿದ್ದು, ದಿನಕ್ಕೆ 50ಕ್ಕೂ ಹೆಚ್ಚು ಬಾಕ್ಸೈಟ್ ಲಾರಿಗಳು ವಿಟ್ಲ ಪರಿಸರದಲ್ಲಿ ಸಂಚರಿಸುತ್ತಿವೆ. ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಕನ್ಯಾನ-ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಯಾವ ಕ್ಷಣ ಯಾರ ಪ್ರಾಣ ಬಲಿ ಪಡೆಯುತ್ತೋ ಎಂಬ ಆತಂಕ ವ್ಯಕ್ತವಾಗಿದೆ. ದಿನದ 24ಗಂಟೆಯೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ 50-80ಟನ್ ತೂಕದ ಅಕ್ರಮ ಬಾಕ್ಸೈಟ್ ತುಂಬಿದ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ.