ಡಕಾಯಿತಿ ಪ್ರಕರಣದ ಆರೋಪಿಯಾಗಿದ್ದ ಗಣೇಶ್ ಎಂಬಾತನ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಥರ್ಡ್ ಡಿಗ್ರಿ ಟಾರ್ಚರ್ನಿಂದ ಗಣೇಶ್ ಮೃತಪಟ್ಟಿರುವ ಆರೋಪ ಬೆಂಗಳೂರಿನ ಹೆಚ್ಎಸ್ಆರ್ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.
ಡಕಾಯಿತಿ ಪ್ರಕರಣದ ಹಿನ್ನಲೆ ಡಿ.22ರಂದು ಹೆಚ್ಎಸ್ಆರ್ ಲೇಔಟ್ ಪೊಲೀಸರು ಆರೋಪಿ ಮಡಿವಾಳದ ತಾವರೆಕೆರೆ ಮೂಲದ ಗಣೇಶನನ್ನು ಬಂಧಿಸಿದ್ದರು. ಬಳಿಕ ತನಿಖೆಗೆ ಒಳಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟಿದ್ದರು. ನಿನ್ನೆ ಆಸ್ಪತ್ರೆಗೆ ಆರೋಪಿ ಗಣೇಶ್ನನ್ನು ಕರೆದೊಯ್ಯಲಾಗಿತ್ತು. ಆದರೆ, ತೀವ್ರ ನೋವಿನಿಂದ ಬಳಲಿದ್ದ ಆರೋಪಿ ಗಣೇಶ್, ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದ.
‘ಗಣೇಶ್ ಮರ್ಮಾಂಗಕ್ಕೆ ಖಾರದಪುಡಿ ಎರಚಲಾಗಿದ್ದು, ನೋವಿನ ನಡುವೆಯೂ 4 ದಿನ ಠಾಣೆಯಲ್ಲಿರಿಸಿಕೊಂಡಿದ್ದರು. ಆರೋಗ್ಯ ಹದಗೆಡುತ್ತಿದ್ದಂತೆ ತರಾತುರಿಯಲ್ಲಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಈ ಪೊಲೀಸರ ಟಾರ್ಚರ್ನಿಂದಲೇ ಗಣೇಶ್ ಮೃತನಾಗಿದ್ದಾನೆ ಎಂದು ಪೊಲೀಸರ ವಿರುದ್ಧ ಮೃತ ಗಣೇಶ್ ಸ್ನೇಹಿತ ವಿನೋದ್ ಎಂಬಾತ ಗಂಭೀರ ಆರೋಪ ಮಾಡಿದ್ದಾನೆ.
‘ನನಗೆ ಮೃತ ಗಣೇಶ್ ಎರಡೂವರೆ ಲಕ್ಷ ಹಣ ನೀಡಿದ್ದ. ಈ ಹಿನ್ನಲೆ ಹಲವು ಬಾರಿ ಪೋನ್ ಕರೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಸಹ 5 ದಿನ ಠಾಣೆಯಲ್ಲಿ ಅಕ್ರಮವಾಗಿರಿಸಿಕೊಂಡಿದ್ದರು. ಬಳಿಕ ನನ್ನ ಹೊರ ಬಿಡಲು 6 ಲಕ್ಷ ಹಣ, ಚಿನ್ನ ತೆಗೆದುಕೊಂಡಿದ್ದಲ್ಲದೇ, ಜೊತೆಗೆ ನನ್ನ ತಂದೆಯ ಮೇಲೂ ಹಲ್ಲೆ ಮಾಡಿದ್ದರು. ನಂತರ ಬೆದರಿಸಿ ನಮ್ಮ ತಂದೆ ಬಳಿ ಹೆಚ್ ಎಸ್ಆರ್ ಬಡಾವಣೆ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಎಂಬುವವರು ಹಣ ಮತ್ತು ಚಿನ್ನ ಪಡೆದುಕೊಂಡರು ಎಂದು ಮೃತ ಗಣೇಶ್ ಸ್ನೇಹಿತ ವಿನೋದ್ ಗಂಭೀರ ಆರೋಪ ಮಾಡಿದ್ದಾರೆ.