Saturday, April 27, 2024
spot_imgspot_img
spot_imgspot_img

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಅಂತರಂಗದ ಬೆಳಕು ದೇಶದ ಭವಿಷ್ಯವನ್ನು ಬೆಳಗಬೇಕು–ಯು.ಜಿ.ರಾಧ

ಪುತ್ತೂರು: ವಿದ್ಯಾರ್ಥಿ ಸಂಘಟನೆಗಳು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ವಿದ್ಯಾರ್ಥಿಗಳು ಬದುಕನ್ನು ಗೌರವಿಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು. ದೊರೆತ ಅವಕಾಶಗಳನ್ನು ಉಪಯೋಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ಪಡೆದುಕೊಳ್ಳಬೇಕು. ಅಂತರಂಗದ ಬೆಳಕು ದೇಶದ ಭವಿಷ್ಯವನ್ನು ಬೆಳಗುವಂತಾಗಬೇಕು ಎಂದು ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ ಸಂಚಾಲಕ ಯು.ಜಿ.ರಾಧ ಹೇಳಿದರು.

ವಿವೇಕಾನಂದ ಪದವಿಪೂರ್ವಕಾಲೇಜಿನ 2020-21 ಸಾಲಿನ ವಿದ್ಯಾರ್ಥಿ ಸಂಘ, ಲಲಿತಾಕಲಾ, ವಿಜ್ಞಾನ, ವಾಣಿಜ್ಯ, ಸಾಹಿತ್ಯ, ಕ್ರೀಡಾಸಂಘ, ಸಂಸ್ಕಾರ ಸಮಿತಿ, , ಇಕೋಕ್ಲಬ್ , ಚಿಗುರು ಸಮಿತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಿಯಾಧರ್ಮದ ಮುನ್ನೋಟ, ಮಾನವೀಯ ಮಿಡಿತ, ಬದುಕಿನೆಡೆಗಿನ ತುಡಿತಗಳು ಯಶಸ್ವೀ ಬದುಕಿನ ಶಾಶ್ವತ ಸೂತ್ರಗಳು.ಅಂಕಗಳಿಕೆಗೆ ಮಾತ್ರ ಸೀಮಿತವಾಗದೆ ಬದುಕಿನಲ್ಲಿ ಉತ್ತಮ ಅಭಿರುಚಿ, ಆಸಕ್ತಿ, ಅನುಭವಜ್ಞಾನ ಮತ್ತು ಜೀವನಪ್ರೀತಿಯನ್ನು ಅಳವಡಿಸಿಕೊಂಡು ಬದ್ಧತೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು.ಒಮ್ಮತದಿಂದ ಕಾರ್ಯ ನಿರ್ವಹಿಸುವ ಮನೋಭಾವವನ್ನು ಬೆಳೆಸಿಕೊಂಡು ಪರಂಪರೆ, ಪರಿಸರ ಮತ್ತು ಕಠಿಣ ಪರಿಶ್ರಮದ ನೆಲೆಗಟ್ಟಿನಲ್ಲಿ ಮೌಲ್ಯಾಧರಿತ ಜೀವನವನ್ನು ರೂಢಿಸಿಕೊಂಡರೆ ಬದುಕು ಉತ್ತಮವಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಲನಚಿತ್ರ ನಟ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೇತನ್‌ರೈ ಮಾಣಿ ಮಾತನಾಡಿ ವಿದ್ಯಾರ್ಥಿ ಜೀವನವು ಚಿನ್ನದ ಜೀವನ. ಸರ್ವತೋಮುಖ ಬೆಳವಣಿಗೆಯ ಮೂಲಕ ಪರಿಪಕ್ವತೆಯನ್ನು ಪಡೆಯುವ ಸಮಯ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಏನಾದರೂ ಸಾಧಿಸಿ ತೋರಿಸಬೇಕು. ನಿಜವಾದ ಶಿಕ್ಷಣವು ಜೀವನದಲ್ಲಿ ಎದುರಾಗುವ ನಾನಾ ರೀತಿಯ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ನೀಡುತ್ತದೆ. ಸೋಲು ಎದುರಾದಾಗ ಧೈರ್ಯದಿಂದ ಎದುರಿಸಿ ವಾಸ್ತವಕ್ಕೆ ಮುಖಮಾಡಿ ನಿಲ್ಲಬೇಕು.ಮಹತ್ವಾಕಾಂಕ್ಷೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು.ಆಧುನಿಕ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಉನ್ನತಿಗೇರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ವತ್ಸಲಾರಾಜ್ಞಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು.ಮುಂದಿನ ಜೀವನಕ್ಕೆ ಅಗತ್ಯವಿರುವ ಭದ್ರ ಬುನಾದಿಯನ್ನು ಹಾಕಿಕೊಳ್ಳಬೇಕು.ಸಮಾಜಕ್ಕೆ ಒಳ್ಳೆಯ ಹೆಸರನ್ನು ತರಬೇಕು. ಪರಿಶ್ರಮ ಮತ್ತು ಪ್ರಾಮಾಣಿಕತೆಯ ಪ್ರತಿನಿಧಿಗಳಾಗಬೇಕು.ಪ್ರೀತಿ, ದಯೆ, ಪರೋಪಕಾರ, ಹೊಂದಾಣಿಕೆ ಯನ್ನು ರೂಢಿಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ಮತ್ತು ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಜಗತ್ತಿಗೆ ಹೊಸ ಬೆಳಕು ನೀಡಬೇಕು ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಯೂರ್ ಬಿ.ಜಿ, ಕಾರ್ಯದರ್ಶಿ ಕ್ಷಿತೀಜ್ ಎಚ್.ಎಸ್, ಜತೆ ಕಾರ್ಯದರ್ಶಿ ಶ್ರೇಯಾ ಪಿ, ಕ್ರೀಡಾ ಸಂಘದ ಕಾರ್ಯದರ್ಶಿ ಜೀವನ್ ಸಿ.ಕೆ, ಜತೆ ಕಾರ್ಯದರ್ಶಿ ಐಶ್ವರ್ಯ ಎಮ್. ವೈ ಇವರಿಗೆ ಪ್ರಮಾಣ ವಚನವನ್ನು ಬೋಧಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯ ರವಿಮುಂಗ್ಲಿಮನೆ ಉಪಸ್ಥಿತರಿದ್ದರು. ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ಸ್ವಾಗತಿಸಿ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ ವಂದಿಸಿದರು. ಹತ್ತನೇ ತರಗತಿಯಲ್ಲಿ ಶಿಕ್ಷಣ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

- Advertisement -

Related news

error: Content is protected !!