


ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಇಂದು (ಮೇ.13) ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಚ್.ಡಿ ರೇವಣ್ಣವನ್ನು ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆದ್ರೆ, ರೇವಣ್ಣ ಅವರು ನಾಳೆ(ಮೇ 14) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಎಸ್ಐಟಿ ಬಂಧನದ ಬಳಿಕ ಹೆಚ್.ಡಿ ರೇವಣ್ಣ ಅವರು ಜಾಮೀನಿಗಾಗಿ ಜನಪ್ರತಿನಿಧಿಗಳ ನ್ಯಾಯಾಲಯ ಮೊರೆ ಹೋಗಿದ್ದರು. ರೇವಣ್ಣ ಪರ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರು. ಇನ್ನು ಎಸ್ಐಟಿ ಪರ ಎಸ್ಎಸ್ಪಿ ಜಾಯ್ನಾ ಕೊಥಾರಿ ಅವರು ವಾದ ಮಂಡಿಸಿದರು. ಜಾಮೀನು ಸಿಕ್ಕರೂ ಇಂದು ಬಿಡುಗಡೆ ಭಾಗ್ಯವಿಲ್ಲ. ಯಾಕೆಂದರೆ ಕೋರ್ಟ್ ಸೂಚಿಸಿರುವ ಷರತ್ತುಗಳ ಪ್ರಕಾರ ಐದು ಲಕ್ಷ ಬಾಂಡ್ ಜೊತೆ ಇಬ್ಬರ ಶ್ಯೂರಿಟಿ ನೀಡಬೇಕು. ಅಲ್ಲದೇ ಕೋರ್ಟ್ ಜಾಮೀನು ಆದೇಶ ಪ್ರತಿಯನ್ನು ತೆಗೆದುಕೊಂಡು ಜೈಲಾಧಿಕಾರಿಗಳಿಗೆ ನೀಡಬೇಕು. ಹೀಗಾಗಿ ಇವೆಲ್ಲ ನೀಡಬೇಕಾದರೆ ಈಗಾಗಲೇ ಸಮಯ ಆಗಿದ್ದರಿಂದ ರೇವಣ್ಣ ನಾಳೆ(ಮೇ 14) ಸಂಜೆ ವೇಳೆಗೆ ಬಿಡುಗಡೆಯಾಗಲಿದ್ದಾರೆ ಎಂದು ವರದಿಯಾಗಿದೆ.