ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅಮಾನತು ಮಾಡಿ ಆದೇಶ ಹೊರಡಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಅಮಾನತಾಗಿರುವ ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ನಂಜೇಶ್ ಹಾಗೂ ಕಾನ್ಸ್ಟೇಬಲ್ ಪ್ರಸನ್ನ ಕುಮಾರ್ ಹಾಗೂ ಆತ್ಮಹತ್ಯೆ ಮಾಡಿದ ವ್ಯಕ್ತಿ ನಗರ್ಲೆ ಗ್ರಾಮದ ಕಿರಣ್ ಕುಮಾರ್ (22) ಎಂದು ಗುರುತಿಸಲಾಗಿದೆ.
ಗಲಾಟೆ ವಿಚಾರದಲ್ಲಿ ಬಿಳಿಗೆರೆ ಠಾಣೆಯ ಎಸ್ಐ, ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆತಂದಿದ್ದು, ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆಯಲು ಹೋಗಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಆರೋಪಿಗಳ ಜವಾಬ್ದಾರಿ ನಂಜೇಶ್ ಹಾಗೂ ಪ್ರಸನ್ನ ಕುಮಾರ್ ಅವರು ನಿಭಾಯಿಸಬೇಕಿತ್ತು. ಇಬ್ಬರು ಆರೋಪಿಗಳ ಕಿರಣ್ ಕುಮಾರ್ ಠಾಣೆಯಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ. ಅಲ್ಲದೆ ಪೊಲೀಸರ ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಕುಮಾರ್ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಇಬ್ಬರು ಸಿಬ್ಬಂದಿಯನ್ನು ಇಲಾಖಾ ವಿಚಾರಣೆಗೆ ಆದೇಶಿಸಿ ಸಸ್ಪೆಂಡ್ ಮಾಡಲಾಗಿದೆ.