ನವದೆಹಲಿ: ಹೊಸ ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ವಾಟ್ಸಾಪ್’ಗೆ ಸೂಚಿಸಿದೆ.
ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್ ಕಾರ್ಟ್’ಗೆ ಪತ್ರ ಬರೆದಿದ್ದು, ಭಾರತೀಯ ಬಳಕೆದಾರರ ಮಾಹಿತಿ, ಗೌಪ್ಯತೆ ಮತ್ತು ಡೇಟಾ ಭದ್ರತೆಯನ್ನು ಗೌರವಿಸಬೇಕು. ಭಾರತದಲ್ಲಿ ಬಳಕೆದಾರರಿಗೆ ಸಂದೇಶ ಸೇವೆಯಿಂದ ಪ್ರಸ್ತಾಪಿಸಲಾದ ಇತ್ತೀಚಿನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಹಿಂತೆಗೆದುಕೊಳ್ಳಬೇಕೆಂದು ಹೇಳಿದೆ.
ಉದ್ದೇಶಿತ ಬದಲಾವಣೆಗಳನ್ನು ಹಿಂತೆಗೆದುಕೊಳ್ಳಲು ಮತ್ತು ಮಾಹಿತಿ ಗೌಪ್ಯತೆ, ಆಯ್ಕೆ ಸ್ವಾತಂತ್ರ್ಯ ಮತ್ತು ಡೇಟಾ ಭದ್ರತೆಯ ಬಗ್ಗೆ ತನ್ನ ಧೋರಣೆಯನ್ನು ಮರುಪರಿಶೀಲಿಸುವಂತೆ ಸಚಿವಾಲಯ ಸೂಚಿಸಿದೆ. ಭಾರತೀಯರಿಗೆ ಸೂಕ್ತ ಗೌರವ ನೀಡಬೇಕು ಎಂದು ಹೇಳಿರುವ ಕೇಂದ್ರ ಸರ್ಕಾರ, ವಾಟ್ಸಾಪ್ ಸೇವಾ ಮತ್ತು ಖಾಸಗಿತನದ ನಿಯಮಗಳಲ್ಲಿ ಏಕಪಕ್ಷೀಯವಾಗಿ ಯಾವುದೇ ಬದಲಾವಣೆ ಮಾಡಿದರೆ ಅದು ನ್ಯಾಯೋಚಿತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರ ಡೇಟಾ-ಹಂಚಿಕೆಯ ಪ್ರೋಟೋಕಾಲ್’ಗಳು ಮತ್ತು ವ್ಯವಹಾರ ಪದ್ಧತಿಗಳ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ವಾಟ್ಸಾಪ್’ಗೆ ವಿಸ್ತೃತವಾದ ಪ್ರಶ್ನಾವಳಿಯನ್ನು ನೀಡಿದೆ. ಭಾರತೀಯ ಬಳಕೆದಾರರಿಂದ ವಾಟ್ಸಾಪ್ ಅಪ್ಲಿಕೇಶನ್ ಸಂಗ್ರಹಿಸುವ ನಿಖರ ಮಾಹಿತಿ, ಅನುಮತಿಗಳ ವಿವರ ಮತ್ತು ಬಳಕೆದಾರರ ಸಮ್ಮತಿ ಮತ್ತು ಬಳಕೆ ಮತ್ತು ಕಾರ್ಯನಿರ್ವಹಣೆ ಮತ್ತು ನಿರ್ದಿಷ್ಟ ಸೇವೆಗೆ ಸಂಬಂಧಿಸಿದಂತೆ ಈ ಎರಡೂ ಮಾಹಿತಿಗಳನ್ನು ಕೇಂದ್ರ ಸರ್ಕಾರ ಕೋರಿದೆ.
ಭಾರತ ಮತ್ತು ಇತರ ದೇಶಗಳಲ್ಲಿ ವಾಟ್ಸಾಪ್ ನ ಗೌಪ್ಯತಾ ನೀತಿಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾಹಿತಿ, ಮಾಹಿತಿ ಭದ್ರತೆ ನೀತಿ, ಸೈಬರ್-ಭದ್ರತಾ ನೀತಿ, ಗೌಪ್ಯತೆ ನೀತಿ ಮತ್ತು ಗೂಢಲಿಪೀಕರಣ ನೀತಿಗಳ ಬಗ್ಗೆಯೂ ವಿವರ ನೀಡಬೇಕೆಂದು ಪತ್ರದಲ್ಲಿ ಸರ್ಕಾರ ಹೇಳಿದೆ.