


ಬಟ್ಟೆ ಒಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ಬೀಚನಹಳ್ಳಿ ಬಲದಂಡೆ ನಾಲೆಯಲ್ಲಿ ನಡೆದಿದೆ.
ತಾಲೂಕಿನ ಹುಸ್ಕೂರು ಗ್ರಾಮದ ಶಂಕರ ಮತ್ತು ಪತ್ನಿ ಬೇಬಿ ಮೃತರು. ಈ ದಂಪತಿಗೆ 5 ವರ್ಷದ ಗಂಡು ಮಗುವಿದೆ. ಹುಸ್ಕೂರು ಗ್ರಾಮದಿಂದ ಹರತಲೆ ಬಳಿಯಿರುವ ಬೀಚನಹಳ್ಳಿ ಬಲದಂಡೆ ನಾಲೆಗೆ ಬಟ್ಟೆ ಒಗೆಯಲೆಂದು ಬೇಬಿ ಬಂದಿದ್ದರು. ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಶಂಕರ ನಾಲೆಯ ಬಳಿ ಬಂದಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೇಬಿ ನೀರಿನಲ್ಲಿ ಹೋಗುತ್ತಿದ್ದ ವೇಳೆ ಪತ್ನಿಯನ್ನು ರಕ್ಷಿಸಲೆಂದು ಶಂಕರ ಸಹ ನಾಲೆಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ, ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರ ಶವಗಳು ತಾಲ್ಲೂಕಿನ ಕಳಲೆ ಗ್ರಾಮದ ಬಳಿ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.